ಬೆಂಗಳೂರು: ‘ಕವಿ ಸಿದ್ದಲಿಂಗಯ್ಯ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಒತ್ತಾಯಿಸಿದರು.
ಎಚ್.ಎಸ್.ದೊರೆಸ್ವಾಮಿ, ಸಿದ್ದಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಕೋ.ವೆಂ.ರಾಮಕೃಷ್ಣೇಗೌಡ, ಫಾ.ಐಸಾಕ್ ಅವರಿಗೆ ಕರ್ನಾಟಕ ವಿಕಾಸ ರಂಗ ಹಾಗೂ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾವ್ಯವಾಗಲಿ ಖಡ್ಗ’ ಎಂಬುದನ್ನು ಅನುಸರಿಸಿದ್ದ ಸಿದ್ದಲಿಂಗಯ್ಯ ಅವರು, ಬುದ್ಧ–ಬಸವಣ್ಣನವರ ತತ್ವಗಳನ್ನು ಜೀವನದ ಭಾಗವಾಗಿಸಿಕೊಂಡಿದ್ದರು. ಅವರು ಬಹುಮುಖ ನೆಲೆಯಲ್ಲಿ ಕನ್ನಡದ ಕೆಲಸ ಮಾಡಿದ್ದರು’ ಎಂದರು.
ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು, ‘ಕನ್ನಡ ನಾಡು–ನುಡಿಯ ವಿಚಾರದಲ್ಲಿ ಬೆಳಕಿನ ಕಿಡಿಯಾಗಿದ್ದ ಸಿದ್ದಲಿಂಗಯ್ಯ ಅವರ ಹೆಸರನ್ನು ಶಾಶ್ವತಗೊಳಿಸುವ ಜವಾಬ್ದಾರಿ ಸಮಾಜ ಹಾಗೂ ಸರ್ಕಾರದ ಮೇಲಿದೆ’ ಎಂದು ಹೇಳಿದರು.
‘ಸ್ವಾತಂತ್ರ್ಯ ಹೋರಾಟದ ಜೀವಂತ ಸಾಕ್ಷಿಯಾಗಿ, ಸರಳ ಜೀವನ ನಡೆಸಿದ್ದ ಎಚ್.ಎಸ್.ದೊರೆಸ್ವಾಮಿ ಅವರ ಮಾದರಿ ಜೀವನವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.