ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಲಯದಲ್ಲಿ ವಿಪತ್ತು ನಿರ್ವಹಣೆ ಹಾಗೂ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸದೇ ಇದ್ದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಶಾಸಕ ಎಂ.ಸತೀಶ್ ರೆಡ್ಡಿ ಎಚ್ಚರಿಸಿದರು.
ಶುಕ್ರವಾರ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೊಮ್ಮನಹಳ್ಳಿಯಲ್ಲಿ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿವೆ. ಮುಂಜಾಗರೂಕತೆ ವಹಿಸಿ ಸಮಸ್ಯೆ ಬಗೆಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಂದ ತಕ್ಷಣ ಬಗೆಹರಿಸಬೇಕು. ಒಳಚರಂಡಿಗಳಲ್ಲಿ ಹೂಳು ತೆಗೆಯಬೇಕು. ಕೆಟ್ಟಿರುವ ಕೊಳವೆಬಾವಿಗಳ ರಿಪೇರಿ ತ್ವರಿತ ಗತಿಯಲ್ಲಿ ಮಾಡಿಸಬೇಕು, ಜರಗನಹಳ್ಳಿಯಲ್ಲಿ ಸುಮಾರು 250 ಕಡೆ ಕೊಳವೆಬಾವಿ ಕೊರೆಸಲಾಗಿದ್ದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಸಾರ್ವಜನಿಕ ಆಸ್ತಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು, ಕೆರೆಗಳಿಗೆ ಕ್ರಸ್ಟ್ ಗೇಟ್ ಅಳವಡಿಸಬೇಕು. ಸಮಸ್ಯೆ ಹೊತ್ತು ಬರುವ ನಾಗರಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚನೆ ನೀಡಿದರು.
ಇಂದಿರಾ ಕ್ಯಾಂಟಿನ್ಗಾಗಿ ಸ್ಮಶಾನದ ಜಾಗ ಗುರುತಿಸಲಾಗಿದೆ. ಅದಕ್ಕೆ ನಿಬಂಧನೆ ಇರುವ ಕಾರಣ ಬೇರೆ ಜಾಗ ಗುರುತಿಸಿ ಎಂದು ಸೂಚಿಸಿದರು.
ಜಂಟಿ ಆಯುಕ್ತ ಎಂ.ಅಜಿತ್, ಮುಖ್ಯ ಎಂಜಿನಿಯರ್ ಶಶಿಕುಮಾರ್, ಕಾರ್ಯಪಾಲಕ ಎಂಜಿನಿಯರ್ ಪಾಪ ರೆಡ್ಡಿ, ಕಂದಾಯ ಅಧಿಕಾರಿ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.