ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ ಆರನೇ ದಿನವೂ ಮುಂದುವರಿದಿದೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ಸಮಾಧಿಯಿಂದ ಹೊರಟ ಪಾದಯಾತ್ರೆ, ಭಾನುವಾರ(ಡಿ.11) ರಾಜಧಾನಿ ತಲುಪಿದೆ. ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದೆ.
‘ಸದಾಶಿವ ಆಯೋಗದ ವರದಿಯ ಗಂಟನ್ನು ಬಿಚ್ಚಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲೇಬೇಕು. ಇಲ್ಲದಿದ್ದರೆ 2018ರಲ್ಲಿ ಕಾಂಗ್ರೆಸ್ಗೆ ಆದ ಗತಿಯೇ 2023ರಲ್ಲಿ ಬಿಜೆಪಿಗೂ ಆಗಲಿದೆ. ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ ರಚಿಸಿ ಸುಮ್ಮನಾದರೆ ಸಾಲದು, ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಕೂಡಲೇ ಶಿಫಾರಸು ಮಾಡಬೇಕು’ ಎಂದು ಹೋರಾಟಗಾರರು ಒತ್ತಾಯಿಸಿದರು.
ಹೋರಾಟಕ್ಕೆ ಚಲನಚಿತ್ರ ನಟ ಚೇತನ್ ಅಹಿಂಸ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ‘ಒಳ ಮೀಸಲಾತಿ ಎಂಬುದು ಕೇವಲ ಒಂದು ಸಮುದಾಯದ ಬೇಡಿಕೆಯಲ್ಲ. ಉತ್ತಮ ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಯ ಕನಸಿನ ಹೋರಾಟ’ ಎಂದರು.
‘ಪರಿಶಿಷ್ಟ ಜಾತಿಯೊಳಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡದಲ್ಲೂ ಒಳ ಮೀಸಲಾತಿ ಅಗತ್ಯವಿದೆ. ಸೋಲಿಗ, ಎರವ, ಜೇನುಕುರುಬ, ಬೆಟ್ಟಕುರುಬ, ಇರುಳಿಗ, ಮಲೆಕುಡಿಯ, ಕೊರಗ ರೀತಿಯ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂದರೆ ಅಲ್ಲಿಯೂ ಒಳ ಮೀಸಲಾತಿ ತರಬೇಕಾಗಿದೆ’ ಎಂದು ಹೇಳಿದರು.
ಒಳ ಮೀಸಲಾತಿ ಜಾರಿಯಾದ ಕೆಲವು ದಿನಗಳಲ್ಲಿ ಅಲ್ಲಿಯೂ ದುರ್ಬಲ ಮತ್ತು ನಿರ್ಲಕ್ಷಿತ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಒಳ ಮೀಸಲಾತಿಯಳಗೂ ಒಳ ಮೀಸಲಾತಿ ತರಬೇಕಾದ ಸಂದರ್ಭಗಳು ಮುಂದೆ ಬರಬಹುದು. ಕಾಲಕ್ಕೆ ತಕ್ಕಂತೆ ಬಹುಜನ ಚಿಂತನೆ ಮುಂದುವರಿಸೋಣ’ ಎಂದರು.