ಬೆಂಗಳೂರು: ಓಲಾ, ಉಬರ್ ಆಟೊಗಳ ಪ್ರಯಾಣ ದರ ನಿಗದಿ ಸಂಬಂಧ ನಾಗರಿಕ ಸಂಘಗಳೊಂದಿಗೆ ಮಂಗಳವಾರ ಸಭೆ ನಡೆಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.
ಓಲಾ, ಉಬರ್, ಆಟೊ ಸಂಘಟನೆಗಳ ಜೊತೆ ಸೋಮವಾರ ನಡೆದ ಸಭೆಯ ನಂತರ ಅವರು ಮಾತನಾಡಿದರು.
‘ಓಲಾ, ಉಬರ್ ಪ್ರಯಾಣ ದರ ವಿಚಾರವಾಗಿ ಹೈಕೋರ್ಟ್ನಲ್ಲಿ ಪ್ರಕರಣವಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಸಭೆ ನಡೆಸಿದ್ದೇವೆ. ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆದು ಎಲ್ಲವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಸಾರ್ವಜನಿಕವಾಗಿ ಯಾವುದೇ ನಿರ್ಧಾರ ತಿಳಿಸುವುದಿಲ್ಲ’ ಎಂದರು.
‘ಕನಿಷ್ಠ ದರವನ್ನು ₹30ರಿಂದ ₹40ಕ್ಕೆ ಏರಿಕೆ ಮಾಡಿ. ಓಲಾ, ಉಬರ್ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ನಮಗೆ ನ್ಯಾಯಯುತ ದರ ನಿಗದಿ ಮಾಡಿ’ ಎಂದು ಆಟೊ ಚಾಲಕರ ಸಂಘದ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು.
‘ಓಲಾ, ಉಬರ್ ತಂತ್ರಜ್ಞಾನ ಸೇವೆಗೆ ಸೀಮಿತವಾಗಿರಬೇಕು. ಶೇ 10 ಮಾತ್ರ ಹೆಚ್ಚು ದರ ತೆಗೆದುಕೊಳ್ಳುವಂತೆ ಮಾಡಿ. ನಿಮಗೆ ಪೂರ್ಣ ಪ್ರಮಾಣದ ಅಧಿಕಾರ ಇದೆ’ ಎಂದರು.