ಬೆಂಗಳೂರು: ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್ಲೈನ್ವರೆಗಿನ 1.85 ಕಿ.ಮೀ. ಉದ್ದದ ಪಾದರಾಯನಪುರ ರಸ್ತೆ ವಿಸ್ತರಣೆ ಯೋಜನೆಯನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸಲಾಗುವುದು ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಪಾದರಾಯನಪುರ ರಸ್ತೆ ವಿಸ್ತರಣೆ ಸಂಬಂಧ ಬಿಬಿಎಂಪಿ, ಪೊಲೀಸ್ ಇಲಾಖೆ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಜತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು.
ಈ ಭಾಗದಲ್ಲಿ ಮೂಲಸೌಕರ್ಯದ ಅಭಿವೃದ್ಧಿಗಾಗಿ ರಸ್ತೆ ವಿಸ್ತರಣೆ ಆಗಬೇಕಿದೆ. ಇದರಿಂದ ವಾಣಿಜ್ಯ ಚಟುವಟಿಕೆಗೂ ಅನುಕೂಲವಾಗ ಲಿದೆ. ರಸ್ತೆ ವಿಸ್ತರಣೆಗಾಗಿ 1,63,190 ಚದರಡಿ ಜಾಗದ ಅಗತ್ಯವಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ₹140 ಕೋಟಿ ಪರಿಹಾರ ಹಣ ನೀಡಿ 140 ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಲಾಗುವುದು. ಯೋಜನೆಗೆ ಸರ್ಕಾರಿ ಮತ್ತು ಖಾಸಗಿಯದ್ದು ಸೇರಿ ಒಟ್ಟು 292 ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಸೋಮಣ್ಣ ಹೇಳಿದರು.