ಪೀಣ್ಯ ದಾಸರಹಳ್ಳಿ: ಬಿಸಿಲಾದರೆ ಧೂಳು, ಮಳೆ ಬಂದರೆ ರಸ್ತೆಗಳೆಲ್ಲಾ ಕೆಸರು ಗದ್ದೆ... ಇದು ಶೆಟ್ಟಿಹಳ್ಳಿ ವಾರ್ಡ್ ಅಬ್ಬಿಗೆರೆ ನಿಸರ್ಗ ಬಡಾವಣೆಯ ದೃಶ್ಯ.
ಈ ಬಡಾವಣೆಯಲ್ಲಿ ಸಾವಿರಾರು ಮನೆಗಳಿದ್ದು, ಹದಗೆಟ್ಟ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿವಾಸಿಗಳು ತಿಣುಕಾಡುತ್ತಿದ್ದಾರೆ. ಒಳ ಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪವೂ ಇಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಈ ಭಾಗದಲ್ಲಿ ಏಳು ವರ್ಷಗಳಿಂದ ವಾಸವಾಗಿದ್ದೇವೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮಳೆ ಬಂದಾಗಲಂತೂ ಬೈಕ್ ಓಡಿಸಲು ಕಷ್ಟವಾಗಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವವರು ಈ ರಸ್ತೆಗೆ ಹಾಗೂ ಬಡಾವಣೆಗೆ ಬರುವುದೇ ಇಲ್ಲ’ ಎಂದು ಸ್ಥಳೀಯ ನಿವಾಸಿ ಸರಿತಾ ಅಳಲು ತೋಡಿಕೊಂಡರು.
‘ಈ ಬಡಾವಣೆ ಅವ್ಯವಸ್ಥೆಯ ಆಗರವಾಗಿದೆ. ಮಳೆಗಾಲ ಬಂದರೆ ಮಕ್ಕಳು ಮತ್ತು ಹೆಂಗಸರು ತಿರುಗಾಡಲು ಆಗದ ಸ್ಥಿತಿ ಇದೆ. ಬೀದಿ ದೀಪಗಳು ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ನಮ್ಮ ಕಷ್ಟವನ್ನು ರಾಜಕಾರಣಿಗಳು ಪರಿಹರಿಸಬೇಕು’ ಎಂದು ಬಡಾವಣೆಯ ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ಮಳೆ ಬಂದಾಗ ಕೆಸರುಗದ್ದೆಯಾಗುವ ರಸ್ತೆಗಳು, ಬಿಸಿಲು ಬಂದಾಗ ಧೂಳಿನಲ್ಲಿ ಜೀವನ ನಡೆಸುವ ಸ್ಥಿತಿ ಇದೆ' ಎಂದು ಸ್ಥಳೀಯ ನಿವಾಸಿ ಅರುಣ್ ಬೇಸರ ವ್ಯಕ್ತಪಡಿಸಿದರು.