ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಪುನರಾಯ್ಕೆ ಆಗಿದ್ದಾರೆ. ಆದರೆ ಹಿಂದೆಂದಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸಿರುವುದು ಅವರ ಹಿರಿಮೆ.
ಈ ಬಾರಿಯ ಚುನಾವಣೆಯಲ್ಲಿ ಶಿವಕುಮಾರ್ ಬರೋಬ್ಬರಿ 79,909 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚು ಪೈಪೋಟಿಯೇ ಇಲ್ಲದಂತೆ ಅನಾಯಾಸವಾಗಿ ಗೆದ್ದು ಬಂದಿದ್ದಾರೆ. ಇದು ಕ್ಷೇತ್ರದಲ್ಲಿ ಅವರು ಹೊಂದಿರುವ ಹಿಡಿತವನ್ನು ವಿವರಿಸಿ ಹೇಳುವಂತಿದೆ.
ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ಮೀನಮೇಷ ಎಣಿಸಿದ್ದು ಅವರ ಗೆಲುವಿನ ಅಂತರ ಹೆಚ್ಚಳಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನಗಳಲ್ಲಿ ಜೆಡಿಎಸ್ ನಾರಾಯಣ ಗೌಡರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು. ಬಿಜೆಪಿ ನಂದಿನಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಆದರೆ ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಹೆಚ್ಚು ಪ್ರಚಾರ ನಡೆಯಲಿಲ್ಲ. ಹಲವು ಕೊರತೆಗಳ ನಡುವೆಯೂ ನಾರಾಯಣ ಗೌಡರು ಗಣನೀಯ ಸಂಖ್ಯೆಯಲ್ಲಿ ಮತ ಗಳಿಸಿದ್ದಾರೆ.