ಬೆಂಗಳೂರು:‘ಪೋಕ್ಸೊ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಮೂಲಕಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದುದಕ್ಷಿಣ ರಾಜ್ಯಗಳ ಮಕ್ಕಳ ರಕ್ಷಣಾ ಆಯೋಗದ ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಬುಧವಾರ ಮುಕ್ತಾಯವಾಯಿತು.
‘ಆಂಧ್ರ ಪ್ರದೇಶದಲ್ಲಿ ಆಯೋಗದ ಅಧ್ಯಕ್ಷರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನಮಾನ ನೀಡಲಾಗಿದೆ. ಇದರಿಂದಾಗಿ ಅಲ್ಲಿನ ಆಯೋಗ ಬಲಿಷ್ಠವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಇದೇ ರೀತಿ ಸ್ಥಾನಮಾನ ಎಲ್ಲ ರಾಜ್ಯಗಳ ಆಯೋಗದ ಅಧ್ಯಕ್ಷರಿಗೆ ಸಿಗ ಬೇಕು’ ಎಂದು ಆಯೋಗದ ಆರ್ಟಿಇ ಸಲಹೆಗಾರ ವಿ.ಪಿ. ನಿರಂಜನಾರಾಧ್ಯ ತಿಳಿಸಿದರು.
‘ಜಿಲ್ಲೆಗಳಲ್ಲಿರುವ ಡೇರಾ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಶಾಲಾ ಶುಲ್ಕ, ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಸಹಿತ ಇನ್ನಿತರ ಸಮಸ್ಯೆಗಳನ್ನು ಆಯೋಗ ಪರಿಹರಿಸುವಂತಾಗಿದೆ. ಆದರೆ ಸಂಶೋಧನೆಗಳು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಿಫಾರಸುಗಳ ಕುರಿತು ಆಯೋಗ ಕಾರ್ಯನಿರ್ವಹಿಸಬೇಕಿದೆ’ ಎಂದರು.
ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿನ್, ‘ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ 2005ರಲ್ಲಿ ರಚನೆಯಾಯಿತು. ಆಯೋಗ 2009ರಲ್ಲಿ ಆರಂಭವಾಯಿತು. ಆದರೆ, ಈವರೆಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿಯನ್ನೇ ನೀಡಿಲ್ಲ. ಅವಶ್ಯವಿರುವ 12 ಮಂದಿ ಪೈಕಿ 6 ಸಿಬ್ಬಂದಿ ಮಾತ್ರ ಕಾಯಂ ಸಿಬ್ಬಂದಿಯಾಗಿದ್ದಾರೆ’ ಎಂದರು.