ಬೆಂಗಳೂರು: ‘ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗಲಭೆಗೆ ಸಂಬಂಧಿಸಿದ ಯಾವುದೇ ಸಾಕ್ಷಿ ಅಥವಾ ವಿಡಿಯೊಗಳಿದ್ದರೆ ಸಾರ್ವಜನಿಕರು ಅದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಕರಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ಡಿ.ಜೆ.ಹಳ್ಳಿ ಠಾಣೆಗೆ ಬುಧವಾರ ಭೇಟಿ ನೀಡಿದ ಅವರು, ಗಲಭೆಯಿಂದ ಆಗಿರುವ ಆಸ್ತಿಪಾಸ್ತಿ ಹಾನಿ ಕುರಿತು ಪರಿಶೀಲನೆ ನಡೆಸಿದರು.
‘ಪೊಲೀಸರು ಅಮಾಯಕರನ್ನು ಬಂಧಿಸಿಲ್ಲ. ತನಿಖೆ ಪ್ರಕ್ರಿಯೆ ಮುಗಿದ ನಂತರ ಆರೋಪಿಗಳ ಕುಟುಂಬಗಳಿಗೆ ಎಲ್ಲ ರೀತಿ ಮಾಹಿತಿ ನೀಡುತ್ತೇವೆ’ ಎಂದರು.
ತನಿಖಾಧಿಕಾರಿಗಳ ಜತೆ ಸಭೆ: ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಮಲ್ ಪಂತ್, ಘಟನೆ ಸಂಬಂಧ ದಾಖಲಾಗಿರುವ ಎಫ್ಐಆರ್, ವಾಹನಗಳು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ವಿವರಗಳನ್ನು ಪಡೆದರು.
‘ಗಲಭೆ ಪ್ರಕರಣದಲ್ಲಿ ಬಂಧಿಸಿರುವವರ ಮಾಹಿತಿಗಳನ್ನು ಕಲೆಹಾಕಿ, ಕೂಲಂಕಷವಾಗಿ ವಿಚಾರಣೆ ನಡೆಸಿ. ಒಂದು ವೇಳೆ ಗಲಭೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದರೆ ಮಾತ್ರ ಅವರನ್ನು ಬಿಟ್ಟು ಕಳುಹಿಸಿ’ ಎಂದು ತನಿಖಾಧಿಕಾರಿಗಳಿಗೆ ಸೂಚಿಸಿದರು.