ಬೆಂಗಳೂರು: ಪೂಜೆ ನೆಪದಲ್ಲಿ ಸೈಬರ್ ವಂಚಕನೊಬ್ಬ, ನಗರದ ಅರ್ಚಕರೊಬ್ಬರ ಖಾತೆಗೆ ಕನ್ನಹಾಕಿದ್ದಾನೆ. ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆ ಸಂಬಂಧ ಸ್ಥಳೀಯ ನಿವಾಸಿ ದಿನೇಶ್ ಭಟ್ ಎಂಬುವರು ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜೂನ್ 27ರಂದು ದಿನೇಶ್ ಅವರಿಗೆ ಕರೆ ಮಾಡಿದ್ದ ಅಪರಿಚಿತ, ತಮ್ಮ ಮನೆಯಲ್ಲಿ ಪೂಜೆ ಇರುವುದಾಗಿ ಹೇಳಿದ್ದ. ಪೂಜೆ ನೆರವೇರಿಸಿದರೆ ₹5 ಸಾವಿರ ಪಾವತಿಸುವುದಾಗಿಯೂ ತಿಳಿಸಿದ್ದ. ಅದಕ್ಕೆ ದಿನೇಶ್ ಒಪ್ಪಿದ್ದರು.’
‘ಮುಂಗಡವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದ ಆರೋಪಿ, ಹಣ ವರ್ಗಾವಣೆ ಸೋಗಿನಲ್ಲಿ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ದಿನೇಶ್ ಅವರು ಸ್ಕ್ಯಾನ್ ಮಾಡಿದ್ದರು. ಕ್ಷಣಮಾತ್ರದಲ್ಲೇ ಬ್ಯಾಂಕ್ ಖಾತೆಯಿಂದ ₹20 ಸಾವಿರ ಕಡಿತವಾಗಿದೆ. ನಂತರ, ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ತಿಳಿಸಿದರು.