ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ಆರ್. ಪ್ರಬುದ್ಧಾ (20) ಕೊಲೆ ಪ್ರಕರಣದ ಆರೋಪಿಯಾದ 14 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಪುರಾವೆಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.
ಪದ್ಮನಾಭನಗರ ಬಳಿಯ ಬೃಂದಾವನ ಲೇಔಟ್ನಲ್ಲಿರುವ ಮನೆಯೊಂದರಲ್ಲಿ ಮೇ 15ರಂದು ಪ್ರಬುದ್ಧಾ ಕೊಲೆ ಆಗಿತ್ತು. ₹ 2 ಸಾವಿರಕ್ಕಾಗಿ ಕೃತ್ಯ ಎಸಗಿದ್ದ ಆರೋಪದಡಿ ಬಾಲಕನನ್ನು ಮೇ 23ರಂದು ಬಂಧಿಸಲಾಗಿತ್ತು.
‘ಆರೋಪಿ ಬಾಲಕನಾಗಿದ್ದರಿಂದ, ಪ್ರಕರಣ ಸೂಕ್ಷ್ಮವಾಗಿದೆ. ಬಾಲಕನನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿತ್ತು. ನಂತರ, ಬಾಲಕನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿತ್ತು. ಬಳಿಕವೇ ಪ್ರಕರಣದ ಬಗ್ಗೆ ಬಾಲಕನಿಂದ ಮಾಹಿತಿ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.