ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿರೋಧಿಸಿ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿರುವ‘ಬಿಲಾಲ್ ಬಾಗ್’ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಏಳನೇ ದಿನ ಪೂರೈಸಿತು.
ಧರಣಿಯ ಸ್ಥಳಕ್ಕೆನಟ ನಾಸೀರುದ್ದೀನ್ ಶಾ ಹಾಗೂಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಹಲವು ದಿನಗಳಿಂದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ರಸ್ತೆಯಲ್ಲೇ ಕುಳಿತು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿರುವುದನ್ನು ಹೊಗಳಿದರು.
‘ಸಿಎಎ ಹಾಗೂ ಎನ್ಆರ್ಸಿ ದೇಶಕ್ಕೆ ಮಾರಕವಾದದ್ದು. ಇದರ ವಿರುದ್ಧ ಇಡೀ ದೇಶವೇ ಹೋರಾಟ ಮಾಡುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟವೂ ಪ್ರಮುಖವಾದದ್ದು’ ಎಂದು ಮೇವಾನಿ ಹೇಳಿದರು.
ವಿದ್ಯಾರ್ಥಿಗಳು ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿದೆಹಲಿಯ ‘ಶಾಹೀನ್ ಬಾಗ್’ ಮಾದರಿಯಲ್ಲಿ ಈ ಧರಣಿ ಹಮ್ಮಿಕೊಳ್ಳಲಾಗಿದೆ. ದಿನವೂ ವಿಶೇಷ ಕಾರ್ಯಕ್ರಮ ಹಾಗೂ ಘೋಷಣೆಗಳ ಮೂಲಕ ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ.
ಟಿಪ್ಪು ಮಸೀದಿ ಬಳಿ ಪ್ರತಿಭಟನೆ: ಹೆಗಡೆ ನಗರದಲ್ಲಿರುವ ಟಿಪ್ಪು ಮಸೀದಿ ಬಳಿಯೂ ಶುಕ್ರವಾರ ಪ್ರತಿಭಟನೆ ನಡೆಯಿತು.
’ಸಿಎಎ ಹಾಗೂ ಎನ್ಆರ್ಸಿ ಬೇಡವೇ ಬೇಡ’, ‘ಸಿಎಎ ತಿರಸ್ಕರಿಸಿ’, ‘ಸಂವಿಧಾನ ರಕ್ಷಿಸಿ’ ಹಾಗೂ ‘ದೇಶ ಒಡೆಯಬೇಡಿ’ ಎಂಬ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
‘ಸರ್ವ ಜನಾಂಗದ ಶಾಂತಿಯುತ ತೋಟವಾದ ದೇಶವನ್ನು ಒಡೆಯಲು ಈ ಕಾಯ್ದೆ ತರಲಾಗಿದೆ. ಇದರಿಂದ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲಾಗುತ್ತಿದೆ. ಇದರ ಹಿಂದೆ ದೇಶವನ್ನು ಒಡೆದು ಆಳುವ ವ್ಯವಸ್ಥಿತ ಸಂಚು ಇರುವಂತೆ ಕಾಣುತ್ತಿದೆ’ ಎಂದು ಪ್ರತಿಟನಾಕಾರರು ದೂರಿದರು.