ಬೆಂಗಳೂರು: ಯಾವುದೇ ಆದೇಶವಿಲ್ಲದೇ ರಾಜ್ಯ ಸರ್ಕಾರ ತಮಿಳುನಾಡಿಗೆ 20 ಸಾವಿರ ಟಿಎಂಸಿ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
‘ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿದ್ದು, ನೀರಿನ ಸಂಗ್ರಹ ಕಡಿಮೆ ಇದೆ ಎಂಬುದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಬೇಕಾಗಿತ್ತು. ಅದನ್ನು ಮಾಡದೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 10 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶಿಸಿದೆ ಎಂದು ಸುಳ್ಳು ಹೇಳಿ ದಿನಕ್ಕೆ 12 ಸಾವಿರ ಕ್ಯುಸೆಕ್ನಿಂದ 15 ಸಾವಿರ ಕ್ಯುಸೆಕ್ವರೆಗೂ ನೀರನ್ನು ತಮಿಳುನಾಡಿಗೆ ಹರಿಸಿದೆ’ ಎಂದು ಸಂಘದ ನಗರ ಘಟಕದ ಅಧ್ಯಕ್ಷ ಪಂಪಣ್ಣ ಬಿ.ಇ. ದೂರಿದರು.
’ಸದ್ಯ ನಮ್ಮಲ್ಲಿ 17 ಟಿಎಂಸಿ ನೀರು ಮಾತ್ರ ಉಳಿದಿದೆ. ಆದರೆ, ನಮ್ಮ ಉಪಯೋಗಕ್ಕೆ ಕೇವಲ 13 ಟಿಎಂಸಿ ನೀರು ಮಾತ್ರ ಸಿಗುತ್ತದೆ. ಇದು ಮೂರು ಜಿಲ್ಲೆಗಳ ಜನರಿಗೆ ಕುಡಿಯುವುದಕ್ಕೂ ಸಾಲುವುದಿಲ್ಲ. ಇನ್ನೂ ವ್ಯವಸಾಯ ಮಾಡುವುದಕ್ಕೆ ಎಲ್ಲಿಂದ ನೀರು ತರಬೇಕು’ ಎಂದು ಪ್ರಶ್ನಿಸಿದರು.
‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡುತ್ತೇವೆ. ನಮ್ಮ ರೈತರನ್ನು ರಕ್ಷಿಸುವುದೇ ಮುಖ್ಯ ಎಂಬ ಮಾತುಗಳನ್ನಾಡುತ್ತಿದ್ದಾರೆ. ಇದನ್ನು ನೀರು ಹರಿಸುವುದಕ್ಕೂ ಮುನ್ನ ಯೋಚಿಸಬೇಕಿತ್ತು. ಈ ಅನ್ಯಾಯಕ್ಕೆ ಮಂಡ್ಯದ ರೈತರು ಬಲಿಪಶುಗಳಾಗಿದ್ದಾರೆ. ಈಗ ನಮ್ಮ ಬೆಳೆ ಮತ್ತು ಕುಡಿಯುವ ನೀರನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಈ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.
ಸಂಘದ ಪ್ರಾಂತ್ಯ ಉಪಾಧ್ಯಕ್ಷ ಸೋಮಶೇಖರ್, ಲಕ್ಷ್ಮಿ ನಾರಾಯಣ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯದರ್ಶಿ ಗಂಗಾಧರ್ ಜಿ., ರೂಪ ಶೇಖರ್ ಇದ್ದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಮಡಿಕೆ ಒಡೆದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ