ಬೆಂಗಳೂರು: ಕೋವಿಡ್-19 ತಡೆಯಲು ಆರೋಗ್ಯ ಇಲಾಖೆ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ತಡೆ ನೀಡಿದ ವಿಧಾನ ಸಭಾಧ್ಯಕ್ಷರ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಲುಸಾರ್ವಜನಿಕ ಲೆಕ್ಕಪತ್ರ ಸಮಿತಿ ಚಿಂತನೆ ನಡೆಸಿದೆ.
ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಹಕ್ಕುಚ್ಯುತಿ ದೂರನ್ನು ನಾವು ಸಲ್ಲಿಸಬೇಕೇ, ಬೇಡವೇ ಎಂಬ ಪ್ರಶ್ನೆಯಿದೆ. ಜೂನ್ 2ರಂದು ಸಮಿತಿ ಸಭೆ ನಡೆಯಲಿದೆ ಎಂದರು.
ಸ್ಪೀಕರ್ ನೊಟೀಸ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಮಿತಿ ಕಾರ್ಯಭಾರಕ್ಕೆ ಇಲ್ಲಿಯವರೆಗೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅಡ್ಡಿಯಾಗಿದೆ ಎಂದರು.
ಅವ್ಯವಹಾರ ಸಂಬಂಧಿಸಿದಂತೆ ಪರಿಶೀಲನೆಗೆ ಲೆಕ್ಕಪತ್ರ ಸಮಿತಿ ಭೇಟಿಗೆ ಅವಕಾಶ ನೀಡಿಲ್ಲ. ಸ್ಪೀಕರ್ ಅವರು ಆದೇಶ ಹೊರಡಿಸುವ ಮೂಲಕ ಶಾಸನ ಸಭೆಯ ಕರ್ತವ್ಯಕ್ಕೆ ಧಕ್ಕೆಯಾಗಿದೆ. ಇದು ನಮ್ಮ ಕರ್ತವ್ಯಕ್ಕೆ ಚ್ಯುತಿ ಮಾಡುವ ಪ್ರಯತ್ನವಾಗಿದೆ. ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೆಂಟಿಲೇಟರ್ ಎಷ್ಡು ಹಣಕ್ಕೆ ಖರೀದಿ ಮಾಡಿದ್ದೀರಿ. ಮಾಸ್ಕ್, ಸ್ಯಾನಿಟೈಸರ್ ಎಷ್ಟಕ್ಕೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಿ ಎಂದೂ ಆರೋಗ್ಯ ಸಚಿವ ಶ್ರೀ ರಾಮುಲು ಅವರಿಗೆ ಪಾಟೀಲರು ಸವಾಲು ಹಾಕಿದರು.
ಪಿಪಿಎ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲವೆಂಬ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವ್ಯವಹಾರದ ದೂರು ಬಂದಿತ್ತು. ಅದನ್ನು ಪರಿಶೀಲನೆ ಮಾಡೋಕೆ ನಾವು ಹೊರಟಿದ್ದು. ಇಲ್ಲಿ ಕಾಂಗ್ರೆಸ್ ನವರು ಪರಿಶೀಲನೆಗೆ ಹೊರಟಿರಲಿಲ್ಲ. ಸಮಿತಿ ಹೊರಟಿದ್ದು ಎಂದರು.