ಯಲಹಂಕ: ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಿಭಾಗದ 159ನೇ ವಾರ್ಷಿಕೋತ್ಸವದ ಅಂಗವಾಗಿ ಪುಟ್ಟೇನಹಳ್ಳಿ ಕೆರೆ ಅಂಗಳದಲ್ಲಿ ಕೆರೆ ಪುನಶ್ಚೇತನ ಕಾರ್ಯಕ್ರಮ ನಡೆಯಿತು.
ಈ ವೇಳೆ ವಿವಿಧ ಜಾತಿಯ 100ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಅಲ್ಲದೆ 1,000ಕ್ಕೂ ಹೆಚ್ಚಿನ ಬೀಜದ ಉಂಡೆಗಳನ್ನು ಭೂಮಿಗೆ ಹಾಕಲಾಯಿತು.
ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಿಭಾಗದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್.ಬಾಲಕೃಷ್ಣನ್ ಮಾತನಾಡಿ, ‘ಸಮಾಜಮುಖಿ ಕೆಲಸಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಸಮಾಜಸೇವೆಯನ್ನು ಸ್ವೀಕರಿಸುವ ನಾವು, ಸಮಾಜ ಹಾಗೂ ಮುಂದಿನ ಪೀಳಿಗೆಗೆ ನೆರವಾಗುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಮಾತನಾಡಿ, ‘ಮನುಷ್ಯನ ಜೀವನಾಡಿಗಳಂತಿರುವ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಬೆಂಗಳೂರಿನಲ್ಲಿದ್ದ 2 ಸಾವಿರ ಕೆರೆಗಳ ಪೈಕಿ ಈಗ 183 ಕೆರೆಗಳು ಮಾತ್ರ ಉಳಿದುಕೊಂಡಿವೆ. ಇವುಗಳನ್ನು ರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಾಗುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
‘ನೀರಿನ ಮಿತಬಳಕೆ, ಮಳೆನೀರು ಸಂಗ್ರಹಣೆ, ಇಂಗುಗುಂಡಿ ಮುಂತಾದ ವಿಧಾನಗಳ ಜೊತೆಗೆ ಹೆಚ್ಚಿನ ಮಳೆ ಸುರಿದ ಸಂದರ್ಭದಲ್ಲಿ ನೆರೆ ಉಂಟಾಗದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಅಲ್ಲದೆ ಅರಣ್ಯ ಸಂಪತ್ತು, ಸಸ್ಯ ಮತ್ತು ಪ್ರಾಣಿಪಕ್ಷಿ ಸಂಕುಲವನ್ನು ರಕ್ಷಿಸಬೇಕಾದ ಅಗತ್ಯವಿದೆ’ ಎಂದರು.