ಬೆಂಗಳೂರು:ನೂರಾರು ಕೋಟಿ ಮೊತ್ತದ ಠೇವಣಿ ದುರುಪಯೋಗ ಆರೋಪ ಎದುರಿಸುತ್ತಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಪ್ರಕರಣದಲ್ಲಿ ಕರ್ನಾಟಕಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯ (ಕೆಪಿಐಡಿ) ನಿಬಂಧನೆಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಕೆಪಿಐಡಿ ಕಾಯ್ದೆಯ ಉಪಬಂಧಗಳನ್ನು ಜಾರಿಗೊಳಿಸುವಂತೆ ಸಹಕಾರ ಸಂಘಗಳ ರಿಜಿಸ್ಟ್ರಾರ್ ಶಿಫಾರಸು ಮಾಡಿದ್ದರೂ ಸರ್ಕಾರ ಕ್ರಮ ಕೈಗೊಳ್ಳದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.
‘ಜೂನ್ 30ರಂದೇ ರಿಜಿಸ್ಟ್ರಾರ್ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ರಿಜಿಸ್ಟ್ರಾರ್ ಅವರ ಶಿಫಾರಸಿಗೆ ಕಾಯಬೇಕಿರಲಿಲ್ಲ. ಪರಿಸ್ಥಿತಿ ಮನವರಿಕೆಯಾದ ತಕ್ಷಣವೇ ಜಾರಿ ಮಾಡಬೇಕಿತ್ತು. ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ತಕ್ಷಣವೇ ಕಾರ್ಯೋನ್ಮುಖವಾಗಬೇಕಿತ್ತು. ಇನ್ನಾದರೂ ವಿಳಂಬ ಮಾಡದೇ ಕೂಡಲೇ ನಿರ್ಧಾರ ಕೈಗೊಳ್ಳಬೇಕು’ ಎಂದು ತಿಳಿಸಿದೆ.
‘ಜೂನ್ 30ರಿಂದ ಜುಲೈ 21ರವರೆಗೆ 1,849 ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸಲಾಗಿದೆ. ಇನ್ನೂ 14,950 ಹೂಡಿಕೆದಾರರಿಗೆ ವಾಪಸ್ ಕೊಡಿಸಬೇಕಿದೆ. ₹2.9 ಕೋಟಿ ನಗದು, ₹3.62 ಕೋಟಿ ಚೆಕ್ ರೂಪದಲ್ಲಿ ಸಾಲ ವಸೂಲಿ ಮಾಡಲಾಗಿದೆ’ ಎಂದು ಸರ್ಕಾರದ ಪರ ವಕೀಲರು ವಿವರಿಸಿದರು.
ಮುಂದಿನ ವಿಚಾರಣೆ ದಿನಾಂಕದಂದು ತನಿಖೆ ಕುರಿತ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಐಡಿಗೆ ಪೀಠ ನಿರ್ದೇಶನ ನೀಡಿತು. ’ಈ ಪ್ರಕರಣ ಸಂಬಂಧ ಸಿಐಡಿ ಮತ್ತು ಇತರ ಇಲಾಖೆಗಳಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಇ.ಡಿ ಅಧಿಕಾರಿಗಳಿಗೆ ನೀಡಬೇಕು’ ಎಂದೂ ತಿಳಿಸಿತು.