ಬೆಂಗಳೂರು: ‘ಮಾಜಿ ಸಚಿವ ಎಂ.ರಘುಪತಿ ನನ್ನ ರಾಜಕೀಯ ಗುರುಗಳು. ಅವರ ಒತ್ತಾಸೆಯಿಂದಾಗಿಯೇ ಕಾಂಗ್ರೆಸ್ ಸೇರಲು ನಿರ್ಧರಿಸಿದೆ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅರಮನೆ ಮೈದಾನದ ಕಿಂಗ್ಸ್ಕೋರ್ಟ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಘುಪತಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಈಚೆಗೆ ಶಾಸಕ ಕೆ.ಜೆ.ಜಾರ್ಜ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರಘುಪತಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಆಶಯ ವ್ಯಕ್ತಪಡಿಸಿದ್ದರು. 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಪುನಃ ನಾನೇ ಮುಖ್ಯಮಂತ್ರಿ ಆಗಬೇಕು ಎಂದು ಆಶಿಸಿದ್ದರು. ಅವರು ಇನ್ನಷ್ಟು ದಿನಗಳು ಇರಬೇಕಿತ್ತು. ಸಮಾಜಕ್ಕೆ ಅವರ ಅಗತ್ಯವಿತ್ತು’ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ ಶ್ರೀನಿವಾಸ್ ಮಾತನಾಡಿ, ‘ನಮ್ಮಜ್ಜನ ರಾಜಕೀಯ ಜೀವನದ ಸಂಕಷ್ಟದ ಕಾಲದಲ್ಲಿ ರಘುಪತಿ ನೆರವಾಗಿದ್ದರು. ನಮ್ಮ ಕುಟುಂಬದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ರಜನಿಕಾಂತ್, ಅಮಿತಾಭ್ ಬಚ್ಚನ್ ಅವರ ಜತೆಗೂ ಉತ್ತಮ ಒಡನಾಟವಿತ್ತು’ ಎಂದು ಸ್ಮರಿಸಿದರು.
ಸ್ಮರಣಾ ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ್ ಕುಮಾರ್, ಕೆ.ಜೆ.ಜಾರ್ಜ್, ಜಮೀರ್ ಅಹಮದ್ ಖಾನ್, ವಿಧಾನಪರಿಷತ್ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಂತಾದವರು ಇದ್ದರು.