ಬೆಂಗಳೂರು: ಕೋವಿಡ್ ಲಸಿಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಎಂ.ಎಸ್. ರಾಮಯ್ಯ ನಡೆಸಿದ ಆಸ್ಪತ್ರೆಯು ನಡೆಸಿದ ಸಮೀಕ್ಷೆಯಲ್ಲಿ ಶೇ 77 ಮಂದಿ ಕೋವಿಡ್ ಲಸಿಕೆ ಪಡೆಯಲು ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿನ 570 ಮಂದಿ ಆರೋಗ್ಯ ಕಾರ್ಯಕರ್ತರ ಸಮೀಕ್ಷೆ ನಡೆಸಲಾಗಿದೆ. 442 ಮಂದಿ ಲಸಿಕೆ ಪಡೆಯಲು ಉತ್ಸುಕರಾಗಿದ್ದರೆ, 120 ಜನ ಹಲವು ಕಾರಣ ನೀಡುವ ಮೂಲಕ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಉಳಿದವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲಸಿಕೆ ಪಡೆಯಲು ಹಿಂದೇಟು ಹಾಕಿದವರಲ್ಲಿ ಅಡ್ಡ ಪರಿಣಾಮವಾಗುತ್ತದೆ ಎಂದು 66 ಜನ ಹೇಳಿದ್ದಾರೆ. ಲಸಿಕೆಯು ಇನ್ನೂ ಪರೀಕ್ಷಾ ಹಂತದಲ್ಲಿರುವುದರಿಂದ ಪಡೆಯುವುದಿಲ್ಲ ಎಂದು ಹೇಳಿದವರ ಸಂಖ್ಯೆ 29. ಲಸಿಕೆಯಿಂದ ಯಾವ ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇರದ ಕಾರಣ ತೆಗೆದುಕೊಳ್ಳುವುದಿಲ್ಲ ಎಂದು 9 ಜನ ಹೇಳಿದ್ದಾರೆ.
‘ಲಸಿಕೆಯ ಪರಿಣಾಮ, ಸುರಕ್ಷತೆ ಬಗ್ಗೆ ಹೆಚ್ಚು ಮಾಹಿತಿ ಒದಗಿದ ನಂತರ ಜನರ ಅಭಿಪ್ರಾಯ ಬದಲಾಗಬಹುದು. ಲಸಿಕೆ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ಹೇಳಿದರು.
‘ಲಸಿಕೆ ತೆಗೆದುಕೊಳ್ಳಲು ಉತ್ಸಾಹ ತೋರಿಸಿದವರಲ್ಲಿ ಹೆಚ್ಚಿನವರು ಶುಶ್ರೂಷಕರು. 309 ಶುಶ್ರೂಷಕರು ಲಸಿಕೆ ಪಡೆಯಲು ಯಾವುದೇ ಆತಂಕವಿಲ್ಲ ಎಂದಿದ್ದಾರೆ. 89 ವೈದ್ಯರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು.