ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಎಚ್.ಎಂ. ರಮೇಶಗೌಡ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ತಮ್ಮ ಅಣ್ಣನ ವಿರುದ್ಧದ ಸುದ್ದಿ ಪ್ರಸಾರ ನಿಲ್ಲಿಸಲು ‘ಟಿವಿ 9’ ಸಿಬ್ಬಂದಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ರಮೇಶಗೌಡ ಸಹೋದರ ರಾಜೇಶ್, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಈ ಬೆಳವಣಿಗೆಗಳ ಮಧ್ಯೆಯೇ, ಮುಖ್ಯಮಂತ್ರಿ ಭೇಟಿ ಮಾಡಲು ರಮೇಶಗೌಡ ಎರಡು ದಿನಗಳಿಂದ ಯತ್ನಿಸುತ್ತಲೇ ಇದ್ದಾರೆ. ಜೆ.ಪಿ. ನಗರದ ನಿವಾಸಕ್ಕೆ ಹೋದಾಗಲೂ ಭೇಟಿಗೆ ಅವಕಾಶ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ರಮೇಶಗೌಡ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡುವ ಕುರಿತು ಕುಮಾರಸ್ವಾಮಿ ಅವರಿಗೆ ಒಲವಿರಲಿಲ್ಲ. ಪರಿಷತ್ತಿಗೆ ಆಯ್ಕೆಯಾದ ಬಳಿಕವೂ ತಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿಕೊಳ್ಳದ ರಮೇಶಗೌಡ ಬಗ್ಗೆ ಮುಖ್ಯಮಂತ್ರಿ ಅಸಮಾಧಾನ ಹೊಂದಿದ್ದಾರೆ. ಭೇಟಿಗೆ ಅವಕಾಶ ನಿರಾಕರಿಸಲು ಇದೇ ಕಾರಣ ಎಂದು ಮೂಲಗಳು ಹೇಳಿವೆ.