ಬೆಂಗಳೂರು: ರಕ್ತ ಚಂದನದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಅಬ್ದುಲ್ ರೆಹಮಾನ್ (25) ಅವರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
‘ಕೋಲಾರ ಜಿಲ್ಲೆಯ ಬೇತಮಂಗಲ ನ್ಯೂ ಟೌನ್ನ ಅಬ್ದುಲ್ ರೆಹಮಾನ್, ಕಾರಿನಲ್ಲಿ ರಕ್ತಚಂದನ ತಂದು ಮಾರಲು ಯತ್ನಿಸುತ್ತಿದ್ದ. ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ. ಆತನಿಂದ 250 ಕೆ.ಜಿ ತೂಕದ 6 ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹ 20 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲ ಆರೋಪಿಗಳು, ರಕ್ತಚಂದನ ತುಂಡುಗಳನ್ನು ಒಂದೆಡೆ ಸಂಗ್ರಹಿಸಿ ಸಾಗಿಸಲು ತಯಾರಿ ನಡೆಸಿದ್ದರು. ಆ ಬಗ್ಗೆ ತಿಳಿದಿದ್ದ ಆರೋಪಿ, ತುಂಡುಗಳನ್ನು ಕದ್ದುಕೊಂಡು ಬಂದಿದ್ದ. ಗ್ರಾಹಕರೊಬ್ಬರಿಗೆ ಮಾರಲು ಕಾಯುತ್ತಿದ್ದಾಗಲೇ ನಮಗೆ ಸಿಕ್ಕಿಬಿದ್ದ’ ಎಂದೂ ತಿಳಿಸಿದರು.
‘ಆರೋಪಿ ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿರುವುದು ಗೊತ್ತಾಗಿದೆ. ರಕ್ತಚಂದನ ಮಾರಾಟದಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದೂ ಹೇಳಿದರು.