ಬೆಂಗಳೂರು: ಜಾತಿಗಳನ್ನು ವಿಭಜಿಸಿ, ಕೋಮುಗಳ ಮಧ್ಯೆ ಧ್ವೇಷ ಬಿತ್ತಿ ಅಧಿಕಾರ ಪಡೆಯುವ ರಾಜಕಾರಣ ವನ್ನು ತಿರಸ್ಕರಿಸುವ ಮೂಲಕ ದಲಿತರು, ಶೂದ್ರರು ಅಂಬೇಡ್ಕರ್ ಅವರ ಆಶಯ ಗಳನ್ನು ಪೂರ್ಣಗೊಳಿಸಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಹೆಣ್ಣೂರು ಶ್ರೀನಿವಾಸ್ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಸಮಾನತಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಹಣ, ಆಮಿಷಗಳಿಗೆ ಮತ ಮಾರಿ ಕೊಂಡ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಅಂಬೇಡ್ಕರ್ ಅನುಯಾಯಿಗಳಿಂದ ಮತ ಪಡೆದು ಅಧಿಕಾರಕ್ಕೆ ಬಂದವರೇ ಇಂದು ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಿದ್ದಾರೆ ’ ಎಂದರು.
ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಮತ್ತೆ ಹಳೆಯ ಪದ್ಧತಿಗೆ ಜಾರುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ತರಗತಿಗಳಿಂದ ಹೊರಗೆ ಉಳಿಯುತ್ತಿದ್ದಾರೆ. ಪರಿಶಿಷ್ಟರ ಶಿಕ್ಷಣಕ್ಕೆ ಕುತ್ತು ಬಂದಿದೆ ಎಂದರು.
ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್, ಭಾರತದಲ್ಲಿ ಜನಿಸಿದ ಎಲ್ಲ ವರ್ಗಗಳಿಗೂ ಮತದಾನದ ಹಕ್ಕು ಸಿಗುವಂತೆ ಮಾಡಿದ್ದು ಅಂಬೇಡ್ಕರ್. ಇಂತಹ ಹಕ್ಕಿನ ಸದ್ಬಳಕೆಯಾಗಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ‘ವೇದಗಳಲ್ಲೇ ಪ್ರಜಾಪ್ರಭುತ್ವ ಇತ್ತು ಎನ್ನುವ ವಾದ ಒಪ್ಪಲು ಸಾಧ್ಯವಿಲ್ಲ. ಅಂದು ಪ್ರಜಾಪ್ರಭುತ್ವ ಇದ್ದಿದ್ದರೆ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವರ್ತನೆಗಳು ಏಕೆ ಜೀವಂತವಾಗಿ ಇರುತ್ತಿದ್ದವು’ ಎಂದರು.