ಬೆಂಗಳೂರು: ‘ನಗರದಲ್ಲಿ ಕೋವಿಡ್ ಕುರಿತ ಜಾಗೃತಿ ಸಂದೇಶಗಳನನ್ನು ಒಳಗೊಂಡ ಜಾಹೀರಾತು ಫಲಕಗಳನ್ನು ಅಳವಡಿಸಿಕೊಳ್ಳಲು ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ರೀತಿಯ ಎಲ್ಲಾ ಫಲಕಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ.
ಅನಧಿಕೃತ ಜಾಹೀರಾತು ಫಲಕಗಳನ್ನು ನಗರದಲ್ಲಿ ಅಳವಡಿಸಿರುವ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
‘ಕೋವಿಡ್ ಬಗ್ಗೆ ಜಾಗೃತಿ ಸಂದೇಶಗಳನ್ನು ಪ್ರದರ್ಶನ ಮಾಡಲು ಅನುಮತಿ ನೀಡುವಂತೆ ಸರ್ಕಾರ ಮಾಡಿದ್ದ ಮನವಿಗೆ ಸ್ಪಂದಿಸಿ ಹೈಕೋರ್ಟ್ ಅವಕಾಶ ನೀಡಿತ್ತು. ಆದರೆ, ಖಾಸಗಿ ಉತ್ಪನ್ನಗಳ ಜಾಹೀರಾತಿಗೆ ಈ ಫಲಕಗಳು ಬಳಕೆಯಾಗುತ್ತಿವೆ’ ಎಂದು ಅರ್ಜಿದಾರ ಮಾಯಿಗೌಡ ಚಿತ್ರಗಳನ್ನು ಪೀಠಕ್ಕೆ ಸಲ್ಲಿಸಿದರು.
‘ಫಲಕ ಅಳವಡಿಸಿಕೊಳ್ಳಲು 2020ರ ಜುಲೈ 15ರಂದು ನೀಡಿರುವ ಆದೇಶವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಈ ಆದೇಶವನ್ನು ಏಕೆ ಹಿಂದಕ್ಕೆ ಪಡೆಯಬಾರದು’ ಎಂದು ಪ್ರಶ್ನಿಸಿತು.