ಬೆಂಗಳೂರು: ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ನೀಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಧರಣಿ ನಡೆಸಿದ್ದ ರಾಜ್ಯ ಸರ್ಕಾರ, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳಿಗೆ ಸುಳಿವು ಕೊಡದೆ ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯಗಳನ್ನು ಗುರುವಾರ ದಿಢೀರ್ ಮಂಡಿಸಿ, ಅಂಗೀಕಾರ ಪಡೆಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಬಜೆಟ್ ಮೇಲಿನ ಚರ್ಚೆ ಮುಗಿದ ಬಳಿಕ ದಿಢೀರನೆ ಎರಡು ನಿರ್ಣಯಗಳನ್ನು ಮಂಡಿಸಿದರು. ಕೇಂದ್ರ ಸರ್ಕಾರವು ಆರ್ಥಿಕ ಸಂಪನ್ಮೂಲಗಳನ್ನು ತಾರತಮ್ಯರಹಿತವಾಗಿ ಸಮಾನವಾಗಿ ಹಂಚಿಕೆ ಮಾಡಬೇಕು ಎಂಬುದು ಮೊದಲ ನಿರ್ಣಯ. ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕಾಯ್ದೆ ರೂಪಿಸಬೇಕು ಎಂಬ ಒತ್ತಾಯ ಎರಡನೇ ನಿರ್ಣಯದಲ್ಲಿದೆ.
ಸಚಿವರು ನಿರ್ಣಯ ಮಂಡಿಸುತ್ತಿದ್ದಾಗ ಬಿಜೆಪಿಯವರಿಗೆ ಗೊತ್ತಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಜೆಡಿಎಸ್ ಸದಸ್ಯರೂ ಜತೆಗೂಡಿದರು. ಪ್ರತಿಭಟನೆ ಮಧ್ಯದಲ್ಲೇ ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು. ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಶುಕ್ರವಾರ ರಾಜಭವನಕ್ಕೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಹೇಳಿದೆ.