ಬೆಂಗಳೂರು: ‘ರೈಸ್ ಪುಲ್ಲಿಂಗ್’ ಚೆಂಬು ಹೆಸರಿನಲ್ಲಿ ₹ 2.01 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ವಂಚನೆ ಸಂಬಂಧ ಉದ್ಯಮಿ ಮಹೇಶ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಶಿವಕುಮಾರ್, ಗೋಪಾಲ್, ಮಹೇಶ್, ನಾಗರಾಜ್, ಮುನಿರಾಜು, ಪ್ರಶಾಂತ್, ಮುರುಗನ್, ಬಾಲರಾಜ್, ಗುಣ ಹಾಗೂ ಚಿದಾನಂದಬಾಬು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಟ್ರಾವೆಲ್ಸ್ ಕಂಪನಿ ನಡೆಸುತ್ತಿರುವ ಮಹೇಶ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ತಮ್ಮ ಬಳಿ ರೈಸ್ ಪುಲ್ಲಿಂಗ್ ಚೆಂಬು (ಆರ್ಟಿಕಲ್) ಇರುವುದಾಗಿ ಹೇಳಿದ್ದರು. ಅದಕ್ಕೆ ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇರುವುದಾಗಿ ತಿಳಿಸಿ ನಂಬಿಸಿದ್ದರು.’
‘ವಿಜ್ಞಾನಿಗಳನ್ನು ಕರೆಸಿ ಚೆಂಬು ಪರೀಕ್ಷೆ ಮಾಡಿಸಿ, ಅದರ ವರದಿಯನ್ನು ವಿದೇಶಿಗರಿಗೆ ನೀಡಬೇಕು. ನಂತರ, ಅವರು ಕೇಳಿದಷ್ಟು ಹಣ ಕೊಟ್ಟು ಚೆಂಬು ಖರೀದಿಸುತ್ತಾರೆ. ಇದೆಲ್ಲ ಮಾಡಲು ಆರಂಭದಲ್ಲಿ ಹಣ ಹೂಡಿಕೆ ಮಾಡಬೇಕು’ ಎಂದು ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ದೂರುದಾರರು, ಹಣ ಹೂಡಿಕೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
‘ಹಣ ಪಡೆದು ಹಲವು ದಿನವಾದರೂ ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಇದೊಂದು ವಂಚನೆ ಜಾಲವೆಂಬುದು ತಿಳಿಯುತ್ತಿದ್ದಂತೆ ಮಹೇಶ್ ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.