ಬೆಂಗಳೂರು: ‘ವಿಭೂತಿಪುರದ ಲೇಕ್ ವ್ಯೂ ರಸ್ತೆ (ದೊಡ್ಡನೆಕ್ಕುಂದಿ) ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಬಿಬಿಎಂಪಿ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಬೆಂಗಳೂರು ನವನಿರ್ಮಾಣ ಪಕ್ಷ(ಬಿಎನ್ಪಿ)ಆಗ್ರಹಿಸಿದೆ.
‘ಇದೇ ಮಾರ್ಚ್ ತಿಂಗಳಲ್ಲಿ ರಸ್ತೆ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಮುಂಗಾರು ಮಳೆಗೂ ಮುಂಚಿತವಾಗಿಯೇ ರಸ್ತೆಗೆ ಹಾಕಿದ್ದ ಡಾಂಬರು ಕಿತ್ತುಕೊಂಡು ಬಂದಿದೆ. ಇದರಿಂದ, ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ‘ ಎಂದು ಪಕ್ಷದ ಸದಸ್ಯೆ ಲಲಿತಾಂಬ ಬಿ.ವಿ. ದೂರಿದ್ದಾರೆ. ‘ಮಳೆ ಬಂದರೆ ರಸ್ತೆಯೆಲ್ಲ ಕೆಸರು ಗದ್ದೆಯಂತಾಗುತ್ತದೆ. ಈ ರಸ್ತೆಯಲ್ಲಿ ಪಾದಚಾರಿ ಮಾರ್ಗವಿಲ್ಲದ ಕಾರಣ ಮಳೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಚುನಾವಣೆಯ ವೇಳೆ ಕಳಪೆ ಕಾಮಗಾರಿ ನಡೆಸಲಾಗಿದೆ. ಇದರಿಂದ, ಸ್ಥಳೀಯರು ಪ್ರತಿನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಗೊಳಿಸುವಂತೆ ಈಗಾಗಲೇ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.