ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕಾರ್ಯವೈಖರಿಗೆ ನೌಕರರ ಮುನಿಸು?

Last Updated 17 ಮೇ 2018, 8:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಸರ್ಕಾರಿ ನೌಕರರು ಚಲಾಯಿಸಿದ ಅಂಚೆ ಮತಗಳನ್ನು ಅವಲೋಕಿಸಿದರೆ ಬಾಗೇಪಲ್ಲಿ ಹೊರತುಪಡಿಸಿದಂತೆ ಉಳಿದೆಡೆ ಸರ್ಕಾರಿ ನೌಕರರು ತಮ್ಮ ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಶಾಸಕರ ಕಾರ್ಯವೈಖರಿಯಿಂದ ಬೇಸತ್ತಿದ್ದಾರೆ ಎಂಬ ಅಂಶ ಗೋಚರಿಸುತ್ತದೆ.

ಹಾಲಿ ಶಾಸಕರ ಪೈಕಿ ಸರ್ಕಾರಿ ನೌಕರರ ಮತಗಳನ್ನು ಪಡೆದವರಲ್ಲಿ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರು ಮೊದಲ (555) ಸ್ಥಾನದಲ್ಲಿದ್ದರೆ, ಶಿಡ್ಲಘಟ್ಟದಲ್ಲಿ ಶಾಸಕ, ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಅವರು ಅತಿ ಕಡಿಮೆ (22) ಅಂಚೆ ಮತಗಳನ್ನು ಪಡೆಯುವ ಮೂಲಕ ಕೊನೆಯವರಾಗಿದ್ದಾರೆ.

ಗೌರಿಬಿದನೂರು ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದು ಎರಡು ದಶಕಗಳಿಂದ ಆಡಳಿತದ ಚುಕ್ಕಾಣಿ ಹಿಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (508) ಅವರಿಗಿಂತಲೂ ಇತ್ತೀಚೆಗಷ್ಟೇ ಜೆಡಿಸ್ ಸೇರ್ಪಡೆಗೊಂಡು ಚುನಾವಣೆ ಕಣಕ್ಕಿಳಿಸಿದ ಸಿ.ಆರ್.ನರಸಿಂಹಮೂರ್ತಿ ಅವರಿಗೆ ಹೆಚ್ಚು (719) ಅಂಚೆ ಮತಗಳು ಚಲಾವಣೆಗೊಂಡಿರುವುದು ವಿಶೇಷ.

ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಅವರ ನಂತರ ಹೆಚ್ಚಿನ (429) ಅಂಚೆಮತಗಳು ಜೆಡಿಎಸ್. ಅಭ್ಯರ್ಥಿ, ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರಿಗೆ ಚಲಾವಣೆಗೊಂಡಿವೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್ (478) ಅವರಿಗಿಂತಲೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್ ಅವರ ಪರ ನೌಕರರು ಹೆಚ್ಚು (549) ಒಲವು ತೋರಿರುವುದು ಕಂಡುಬರುತ್ತದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಶಾಸಕ ರಾಜಣ್ಣ ಅವರತ್ತ ಗಮನ ಹರಿಸದ ಸರ್ಕಾರಿ ನೌಕರರು ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಅವರಿಗೆ (525) ಜೈ ಎಂದಿದ್ದಾರೆ. ಈ ಕ್ಷೇತ್ರದಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಬಿ.ಎನ್.ರವಿಕುಮಾರ್ ಅವರಿಗೆ 469 ಮತಗಳು ಚಲಾವಣೆಗೊಂಡಿದ್ದು ವಿಶೇಷವಾಗಿದೆ.

ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರಿಗಿಂತಲೂ (833) ಹೆಚ್ಚಿನ ಮತಗಳನ್ನು (865) ಮಾಜಿ ಶಾಸಕ, ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ತಮ್ಮತ್ತ ಸೆಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT