ಬೆಂಗಳೂರು: ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರ ಮನಃಸ್ಥಿತಿ ಬದಲಿಸಲು, ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ಯುವಕರು ಕೈಜೋಡಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಬಿಐಟಿ ಕಾಲೇಜಿನಲ್ಲಿ ಶನಿವಾರ ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಚಿಕ್ಕಪೇಟೆ ಜನೋತ್ಸವ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.
‘ಅಪರಾಧಗಳನ್ನು, ಭ್ರಷ್ಟಾಚಾರವನ್ನು ಹತ್ತಿರದಿಂದ ಕಂಡಿದ್ದೇನೆ. ಪ್ರಸ್ತುತ ಸನ್ನಿವೇಶಕ್ಕೆ ಸಮಾಜದ ಸ್ಥಿತಿಯೇ ಕಾರಣ. ಜೈಲಿಗೆ ಹೋಗಿಬಂದವರನ್ನು ಸ್ವಾಗತಿಸುವ, ಸತ್ಕರಿಸುವ ಮಟ್ಟಕ್ಕೆ ಜನರು ಬದಲಾಗಿದ್ದಾರೆ. ಶ್ರೀಮಂತರು, ಪ್ರಭಾವಿಗಳನ್ನು ಆರಾಧಿಸುತ್ತಿದ್ದಾರೆ. ದುರಾಸೆ, ಹಣದ ಪ್ರಭಾವ ಮಿತಿ ಮೀರಿದೆ ಎಂದರು.
ಮಾಜಿ ಶಾಸಕ ಆರ್.ವಿ.ದೇವರಾಜ್, ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಅಶ್ವತ್ಥನಾರಾಯಣ, ನಟಿ ಸಪ್ತಮಿ ಗೌಡ, ಪ್ರಮುಖರಾದ ಮಮತಾ ದೇವರಾಜ್, ಆರ್.ವಿ.ಯುವರಾಜ್, ಗಂಡಸಿ ಸದಾನಂದಸ್ವಾಮಿ, ಮುರಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗ ಮೇಳದಲ್ಲಿ 127 ಕಂಪನಿಗಳು ಭಾಗವಹಿಸಿದ್ದವು. 20 ಅಂಗವಿಕಲರೂ ಸೇರಿ 500ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಉದ್ಯೋಗದ ಖಾತ್ರಿಪತ್ರ ನೀಡಲಾಯಿತು.