ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
‘ಅಮೃತಹಳ್ಳಿ ವರದರಾಜ್ ಬಡಾವಣೆಯ ಇಸೈರಾಜ್ ಅಲಿಯಾಸ್ ಕುಂಟ (26) ಹಾಗೂ ಕೊಡಿಗೇಹಳ್ಳಿ ಧನಲಕ್ಷ್ಮಿ ಬಡಾವಣೆಯ ಆನಂದ್ಕುಮಾರ್ ಅಲಿಯಾಸ್ ಡಿಜೆ (22) ಬಂಧಿತರು. ಇವರಿಂದ ₹ 19 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಪ್ರವೀಣ್ ಫ್ಲ್ಯಾಟ್ಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಮೇ 25ರಂದು ಪ್ರವಾಸಕ್ಕೆ ಹೋಗಿದ್ದರು. ಮೇ 27ರಂದು ರಾತ್ರಿ ಮನೆಗೆ ವಾಪಸು ಬಂದು ನೋಡಿದಾಗ, ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಕಳ್ಳತನವಾಗಿದ್ದು ಗೊತ್ತಾಗಿತ್ತು. ನಂತರ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.
‘ಕೆಲ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಫ್ಲ್ಯಾಟ್ನಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ರಾತ್ರಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.
‘ಹಲವು ತಿಂಗಳಿನಿಂದ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಮೃತಹಳ್ಳಿ, ಯಲಹಂಕ, ಸಂಜಯನಗರ, ದೇವನಹಳ್ಳಿ ಹಾಗೂ ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲೂ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.