ಕೆಂಗೇರಿ: ‘ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ವಚನ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದು’ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಚನ ಜ್ಯೋತಿ ಬಳಗದ ವತಿಯಿಂದ ಕಲಾಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ವಚನ ಮೇಳ-2020ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶರಣರ ವಚನಗಳು ಅತ್ಯಂತ ಸರಳವಾಗಿದ್ದರೂ, ಅರ್ಥ ವ್ಯಾಪ್ತಿ ದೊಡ್ಡದು. ಭಾಷಾ ಬೆಳವಣಿಗೆಯೊಂದಿಗೆ ಸಾಮಾಜಿಕ ಬದಲಾವಣೆಗೂ ಅವು ಅಪೂರ್ವ ಕೊಡುಗೆ ನೀಡಿವೆ’ ಎಂದು ಹೇಳಿದರು.
ಇತ್ತೀಚಿನ ಯುವ ಜನಾಂಗದಲ್ಲಿ ಅರಿಷಡ್ವರ್ಗಗಳು ಮನೆ ಮಾಡಿ ಕುಂತಿವೆ. ಇಂದಿನ ಮಕ್ಕಳಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ತುಂಬಿ ಸತ್ಸಮಾಜ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಶಿಕ್ಷಕರು ಹಾಗೂ ಗುರುಪೀಠಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
‘ಸಂಸ್ಕಾರವೇ ನಿಜವಾದ ಸಂಪತ್ತು. ಮಕ್ಕಳಿಗೆ ಸಂಪತ್ತನ್ನು ಬಳುವಳಿಯಾಗಿ ನೀಡುವ ಬದಲು ಸಂಸ್ಕಾರವನ್ನು ನೀಡಬೇಕು’ ಎಂದು ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದರು.
ತರಳಬಾಳು ಕೇಂದ್ರದ ಕಾರ್ಯದರ್ಶಿ ಡಾ.ಎಸ್.ಸಿದ್ದಯ್ಯ, ಉದ್ಯಮಿ ಎಲ್.ವಿ.ಪರಮಶಿವಯ್ಯ, ಸಮಾಜ ಸೇವಕ ಎಸ್.ಎಸ್.ಪಾಟೀಲ್, ಬಿಬಿಎಂಪಿ ಸದಸ್ಯರಾದ ವಿ.ವಿ.ಸತ್ಯನಾರಾಯಣ, ಜಿ.ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.