ಬೆಂಗಳೂರು: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ತಮಿಳುನಾಡಿನ ಬಾಲಕನೊಬ್ಬ ಅಭಿವೃದ್ಧಿಪಡಿಸಿದ್ದ ಸಾಫ್ಟ್ವೇರ್ನಿಂದ ಇ–ಮೇಲ್ ಬಂದಿರುವ ಮಾಹಿತಿಯನ್ನು ಕಲೆಹಾಕಿದ್ದಾರೆ.
20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿ ಇ–ಮೇಲ್ ಸಂದೇಶಗಳು ಬಂದಿದ್ದವು. ಆಯಾ ಠಾಣೆ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆಗೆಂದು ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
‘ಇ–ಮೇಲ್ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ತಮಿಳುನಾಡಿನ 17 ವರ್ಷದ ಬಾಲಕ ಅಭಿವೃದ್ಧಿಪಡಿಸಿದ್ದ ಹೊಸ ಸಾಫ್ಟ್ವೇರ್ನಿಂದ ಇ–ಮೇಲ್ಗಳು ಬಂದಿರುವುದು ಗೊತ್ತಾಗಿದೆ. ತಮಿಳುನಾಡಿಗೆ ಹೋಗಿರುವ ಕೆಲ ಪೊಲೀಸರು, ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭೋಪಾಲ್ನ ಶಾಲೆಗಳಿಗೂ ಬೆದರಿಕೆ: ‘ಬೆಂಗಳೂರು ಮಾತ್ರವಲ್ಲದೇ ಮಧ್ಯಪ್ರದೇಶದ ಭೋಪಾಲ್ನ ಕೆಲ ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಎಲ್ಲ ಸಂದೇಶಗಳು ಪರಸ್ಪರ ಹೋಲಿಕೆಯಾಗುತ್ತಿದ್ದು, ಒಂದೇ ಕಡೆಯಿಂದ ಬಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬಾಲಕ, ತಾನು ಅಭಿವೃದ್ಧಿಪಡಿಸಿದ್ದ ಸಾಫ್ಟ್ವೇರ್ ಮಾರಾಟ ಮಾಡಿದ್ದು, ವಿದೇಶಿ ಪ್ರಜೆಯೊಬ್ಬರು ಸಾಫ್ಟ್ವೇರ್ ಖರೀದಿಸಿರುವುದಾಗಿ ಗೊತ್ತಾಗಿದೆ. ಅದೇ ಪ್ರಜೆ ಬೆದರಿಕೆ ಸಂದೇಶ ಕಳುಹಿಸಿರುವ ಅನುಮಾನವಿದ್ದು, ಅವರ ಬಗ್ಗೆ ಮಾಹಿತಿ ಸಿಗಬೇಕಿದೆ’ ಎಂದೂ ಹೇಳಿವೆ.