ಬೆಂಗಳೂರು: ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಂಗವಾಗಿ ಶನಿವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಕಿಶೋರ ವೈಜ್ಞಾನಿಕ ಸಮ್ಮೇಳನ’ದಲ್ಲಿ ಭಾಗವಹಿಸಿದ 2 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಕರು ಊಟದ ವ್ಯವಸ್ಥೆ ಮಾಡಿರಲಿಲ್ಲ.
ಈ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ದೇಶದಾದ್ಯಂತ 30ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಹಾಗೂ ನಗರದ ಕೆಲವು ಶಾಲೆಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಹೆಚ್ಚಿನವರು ಬೆಳಿಗ್ಗೆ 9.30ಕ್ಕೇ ಬಂದಿದ್ದರು. ಅವರ ಊಟೋಪಚಾರಕ್ಕೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಬೇಸರ ತೋಡಿಕೊಂಡರು.
‘ಸಮ್ಮೇಳನದ ಸಲುವಾಗಿ ನಿರ್ಮಿಸಿರುವ ಕ್ಯಾಂಟೀನ್ನಲ್ಲಿ ಊಟ ಹಾಗೂ ನೀರನ್ನು ಖರೀದಿಸಬಹುದು ಎಂದು ನಮಗೆ ಹೇಳಿದರು. ಆದರೆ, ಆ ಕ್ಯಾಂಟೀನ್ನಲ್ಲಿ ಆಹಾರ ಖರೀದಿಸುವಷ್ಟು ಹಣ ನನ್ನ ಬಹುತೇಕ ಸಹಪಾಠಿಗಳ ಬಳಿ ಇರಲಿಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
‘ಮನೆಯಿಂದಲೇ ಊಟ ಕಟ್ಟಿಕೊಂಡು ಬರುವಂತೆ ನಮಗೆ ಸೂಚಿಸಿದ್ದರು. ಆದರೂ ಅನೇಕರು ಬುತ್ತಿ ತಂದಿರಲಿಲ್ಲ. ಕೆಲವು ವಿದ್ಯಾರ್ಥಿಗಳು ಸಂಜೆ 4 ಗಂಟೆವರೆಗೂ ಕಾರ್ಯಕ್ರಮ ವೀಕ್ಷಿಸಲು ಬಯಸಿದರು. ಊಟ ತಾರದವರು ಹಸಿದ ಹೊಟ್ಟೆಯಲ್ಲೇ ಕಾಲ ಕಳೆಯಬೇಕಾಯಿತು’ ಎಂದು ಶಾಲೆಯೊಂದರ ವಿದ್ಯಾರ್ಥಿಗಳು ತಿಳಿಸಿದರು.
ವಿದ್ಯಾರ್ಥಿಗಳು ಹಸಿದ ಹೊಟ್ಟೆಯಲ್ಲಿರುವ ವಿಷಯ ತಿಳಿದ ಆಯೋಜಕರು ಮಧ್ಯಾಹ್ನ 2 ಗಂಟೆ ವೇಳೆಗೆ ವಡಾ ಮತ್ತು ಕೇಕ್ ಇದ್ದ ಆಹಾರದ ಪೊಟ್ಟಣ ಹಾಗೂ ಟೆಟ್ರಾಪ್ಯಾಕ್ನಲ್ಲಿ ಸುಗಂಧಭರಿತ ಹಾಲನ್ನು ಪೂರೈಸಿದರು.