ಬೆಂಗಳೂರು: ಹಾಸನದ ದೊಡ್ಡಗದ್ದವಳ್ಳಿಯ ಐತಿಹಾಸಿಕ ದೇವಾಲಯದಲ್ಲಿ ಮಹಾಕಾಳಿ ವಿಗ್ರಹ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಒತ್ತಾಯಿಸಿದೆ.
‘ಕ್ರಿ.ಶ. 1114ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಈ ಚತುಷ್ಕುಟ ದೇವಾಲಯವನ್ನು ಕುಲ್ಲಹಣ ರಾವುತ ಮತ್ತು ಸಹಜ ದೇವಿ ಎಂಬ ವಜ್ರದ ವ್ಯಾಪಾರಿ ದಂಪತಿ ಕಟ್ಟಿಸಿದ್ದಾರೆ ಎಂದು ಇತಿಹಾಸದ ಪುಟಗಳಲ್ಲಿ ವಿವರಿಸಲಾಗಿದೆ. ಇಂತಹ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ನ.20ರಂದು ನಡೆದ ದುರ್ಘಟನೆಯು ಬೇಸರವನ್ನುಂಟುಮಾಡಿದೆ.
ಹೃದಯ ವಿದ್ರಾವಕ ಸ್ಥಿತಿಯಲ್ಲಿ ಭಗ್ನಗೊಂಡಿರುವ ವಿಗ್ರಹವನ್ನು ನೋಡಿದಲ್ಲಿ ಕಣ್ಣೀರು ಬರುತ್ತದೆ. ಇಂತಹ ಸ್ಥಿತಿಗೆ ಕಾರಣವಾದವರನ್ನು ಪತ್ತೆ ಮಾಡಿ, ಶಿಕ್ಷೆಗೆ ಒಳಪಡಿಸಬೇಕು’ ಎಂದು ಅಕಾಡೆಮಿಯ ಅಧ್ಯಕ್ಷ ವೀರಣ್ಣಾ ಮಾ. ಅರ್ಕಸಾಲಿ ಆಗ್ರಹಿಸಿದ್ದಾರೆ.