ಬೆಂಗಳೂರು: ಅಪರಿಚಿತ ಸಂಖ್ಯೆಯಿಂದ ಬಂದ ಕರೆ ನಂಬಿದ್ದ ವೃದ್ಧರೊಬ್ಬರು, ಸಿಮ್ ಕಾರ್ಡ್ ಕೆವೈಸಿ (ಗ್ರಾಹಕ ಮಾಹಿತಿ) ನವೀಕರಣ ಮಾಡಿಸಲು ಹೋಗಿ ₹ 27.04 ಲಕ್ಷ ಕಳೆದುಕೊಂಡಿದ್ದಾರೆ.
ಬಾಣಸವಾಡಿ ನಿವಾಸಿಯಾಗಿರುವ 80 ವರ್ಷದ ವೃದ್ಧರೊಬ್ಬರು ವಂಚನೆಗೀಡಾಗಿದ್ದು, ಅವರ ಮಗ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
‘ನಿವೃತ್ತ ನೌಕರರಾದ ವೃದ್ಧ, ಎಸ್ಬಿಐ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಜುಲೈ 4ರಂದು ವೃದ್ಧರ ಮೊಬೈಲ್ಗೆ ಕರೆ ಮಾಡಿದ್ದ ವಂಚಕ, ‘ನಿಮ್ಮ ಮೊಬೈಲ್ ಸಿಮ್ ಕಾರ್ಡ್ ಕೆವೈಸಿ ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮೊಬೈಲ್ ಸಂಖ್ಯೆ ನಿಷ್ಕ್ರಿಯವಾಗಲಿದೆ’ ಎಂದಿದ್ದ. ಅದನ್ನು ನಂಬಿದ್ದ ವೃದ್ಧ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಗೋಪ್ಯ ಸಂಖ್ಯೆಯನ್ನು ಆರೋಪಿ ಜೊತೆ ಹಂಚಿಕೊಂಡಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಾಹಿತಿ ಪಡೆದಿದ್ದ ಆರೋಪಿ, ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 27.04 ಲಕ್ಷ ವರ್ಗಾಯಿಸಿಕೊಂಡಿದ್ದಾನೆ. ಹೊರ ರಾಜ್ಯದ ಸೈಬರ್ ವಂಚಕರು ಕೃತ್ಯ ಎಸಗಿರುವ ಅನುಮಾನವಿದೆ’ ಎಂದೂ ಮೂಲಗಳು ತಿಳಿಸಿವೆ.
ವಂಚಕ ಜಾಲದ ಬಗ್ಗೆ ಎಚ್ಚರ: ‘ಮೊಬೈಲ್ ಸೇವಾ ಕಂಪನಿ ಪ್ರತಿನಿಧಿಗಳು, ಕೆವೈಸಿ ಸಂಬಂಧಪಟ್ಟಂತೆ ಗ್ರಾಹಕರಿಗೆ ಯಾವುದೇ ಕರೆಗಳನ್ನು ಮಾಡುತ್ತಿಲ್ಲ. ಸಂದೇಶಗಳನ್ನೂ ಕಳುಹಿಸುತ್ತಿಲ್ಲ. ಇಂಥ ಕರೆ ಹಾಗೂ ಸಂದೇಶಗಳನ್ನು ಜನರು ನಂಬಬಾರದು’ ಎಂದು ಸೈಬರ್ ಪೊಲೀಸರು ಹೇಳಿದರು.
‘ಹೊರ ರಾಜ್ಯದ ಸೈಬರ್ ವಂಚಕರು, ಕೆವೈಸಿ ಹೆಸರಿನಲ್ಲಿ ಜನರಿಂದ ಬ್ಯಾಂಕ್ ಖಾತೆ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ. ಇಂಥವರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದೂ ಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.