ಕೆ.ಆರ್. ಪುರ: ಹಳೇ ಮದ್ರಾಸ್ ರಸ್ತೆಯಲ್ಲಿರುವ ಮಳಿಗೆಯೊಂದಕ್ಕೆ ನುಗ್ಗಿ ನಕಲಿ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿ ಪ್ರತೀಕ್ (23) ಎಂಬಾತನನ್ನು ಜನರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಉತ್ತರ ಪ್ರದೇಶದ ಪ್ರತೀಕ್, ನಗರದ ಸಾಫ್ಟ್ವೇರ್ ಕಂಪನಿಯೊಂದರ ಉದ್ಯೋಗಿ. ಚಿನ್ನಾಭರಣ ಕಳ್ಳತನ ಸಂಬಂಧ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹೆಚ್ಚು ಹಣ ಸಂಪಾದಿಸುವ ಆಸೆಯಿಂದ ಪ್ರತೀಕ್, ಷೇರು ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ₹ 30 ಲಕ್ಷ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಹಲವರ ಬಳಿ ಸಾಲ ಪಡೆದುಕೊಂಡಿದ್ದರು. ಕ್ರಮೇಣ ನಷ್ಟ ಉಂಟಾಗಿ, ಹೂಡಿಕೆಯ ಎಲ್ಲ ಹಣ ಕಳೆದುಕೊಂಡಿದ್ದರು. ಸಾಲ ವಾಪಸು ನೀಡುವಂತೆ ಹಲವರು ಕೇಳಲಾರಂಭಿಸಿದ್ದರು.’
‘ಕಳ್ಳತನ ಮಾಡಿ ಸಾಲ ತೀರಿಸಲು ಆರೋಪಿ ಸಂಚು ರೂಪಿಸಿದ್ದ. ಚಿನ್ನಾಭರಣ ಮಳಿಗೆಗೆ ಬುಧವಾರ ರಾತ್ರಿ ಗ್ರಾಹಕರ ಸೋಗಿನಲ್ಲಿ ನುಗ್ಗಿದ್ದ. ಚಿನ್ನಾಭರಣ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದ. ಸಿಬ್ಬಂದಿ, ಹಲವು ಚಿನ್ನಾಭರಣಗಳನ್ನು ಟೇಬಲ್ ಮೇಲೆ ತಂದಿಟ್ಟಿದ್ದರು. ಆರೋಪಿ ಚಿನ್ನಾಭರಣಗಳನ್ನು ದೋಚಿಕೊಂಡು ಓಡಿ ಹೋಗುತ್ತಿದ್ದ. ಆಗ ಮಳಿಗೆಯ ಸಿಬ್ಬಂದಿ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರು. ಆಗ ತನ್ನಲ್ಲಿದ್ದ ನಕಲಿ ಗನ್ ತೋರಿಸಿ ಬೆದರಿಸಿ ಚಿನ್ನಾಭರಣಗಳೊಂದಿಗೆ ಓಡಲು ಮುಂದಾದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಿಬ್ಬಂದಿ ಹಾಗೂ ಸ್ಥಳೀಯರು, ಆರೋಪಿಯನ್ನು ಬೆನ್ನಟ್ಟಿದ್ದರು. ಮಾರ್ಗಮಧ್ಯೆಯೇ ಆರೋಪಿಯನ್ನು ಹಿಡಿದು ಥಳಿಸಿದ್ದರು. ‘ಹೆಚ್ಚು ಸಾಲ ಮಾಡಿದ್ದೇನೆ. ಅದನ್ನು ತೀರಿಸಲು ಚಿನ್ನಾಭರಣ ಕದಿಯಲು ಬಂದಿದ್ದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.