ರಾಮನಗರ: ‘ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರಿ ಸೌಮ್ಯಾರೆಡ್ಡಿ ಅವರ ಹೆಸರನ್ನು ರಾಜ್ಯ ಕಾಂಗ್ರೆಸ್, ಹೈಕಮಾಂಡ್ಗೆ ಶಿಫಾರಸು ಮಾಡಿದೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಯನಗರ ವಿಧಾನಸಭೆ ಚುನಾವಣೆ ಮರು ಮತ ಎಣಿಕೆಯಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದು, ಸಾಬೀತಾದರೆ ಸೌಮ್ಯಾ ಅವರು ಮತ್ತೆ ಶಾಸಕಿಯಾಗುತ್ತಾರೆ’ ಎಂದರು.
‘ದಕ್ಷಿಣದಿಂದ ಸ್ಪರ್ಧಿಸುವಂತೆ 25 ವರ್ಷಗಳ ಹಿಂದೆ ನನಗೂ ಹೇಳಿದ್ದರು. ಆಗ ಸ್ಪರ್ಧೆಗೆ ನಿರಾಕರಿಸಿದ್ದೆ. ಈಗ, ನಾಲ್ಕೈದು ಯುವ ನಾಯಕರಿದ್ದು, ಅವರಲ್ಲೇ ಯಾರಿಗಾದರೂ ಅವಕಾಶ ಕೊಡಿ ಎಂದಿದ್ದೇನೆ’ ಎಂದು ತಿಳಿಸಿದರು.