ಹಣ ಪಡೆಯಲು ಸೇರಿದ್ದ ಗ್ರಾಹಕರು
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಪರಿಷ್ಕೃತ ಮಾರ್ಗಸೂಚಿಯಂತೆ ಗ್ರಾಹಕರಿಗೆ ತಲಾ ₹ 1 ಲಕ್ಷ ವಿತರಿಸಲಾಗುತ್ತದೆ ಎಂಬ ಸುದ್ದಿ ತಿಳಿದು ನೂರಾರು ಗ್ರಾಹಕರು ಶನಿವಾರ ಬೆಳಿಗ್ಗೆ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮುಂದೆ ಜಮಾಯಿಸಿದ್ದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ಉಂಟಾಯಿತು.
ಈ ಮುನ್ನ ಗ್ರಾಹಕರು ತಮ್ಮ ಖಾತೆಯಿಂದ ₹ 35 ಸಾವಿರದವರೆಗೆ ಹಣ ಹಿಂಪಡೆಯಲು ಆರ್ಬಿಐ ಅವಕಾಶ ಮಾಡಿಕೊಟ್ಟಿತ್ತು. ಆನಂತರ ಬ್ಯಾಂಕಿನ ಹಣಕಾಸು ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ₹ 1 ಲಕ್ಷ ದವರೆಗೆ ಡ್ರಾ ಮಾಡಬಹುದೆಂದು ಶುಕ್ರವಾರ ನಿರ್ದೇಶನ ನೀಡಿತ್ತು. ಇದರಿಂದಾಗಿ ನೂರಾರು ಗ್ರಾಹಕರು ಹಣ ಪಡೆಯಲು ಬ್ಯಾಂಕಿನ ಕಚೇರಿಗೆ ಧಾವಿಸಿದ್ದರು.
‘ಈ ಮಧ್ಯೆ, ಕೆಲವು ಹಿರಿಯ ನಾಗರಿಕರಿಗೆ ವೈದ್ಯಕೀಯ ವೆಚ್ಚಗಳಿಗಾಗಿ ಬ್ಯಾಂಕ್ ₹ 50 ಸಾವಿರ ವಿತರಿಸಿತ್ತು. ರಿಸರ್ವ್ ಬ್ಯಾಂಕ್ ನಿರ್ದೇಶನದಲ್ಲಿ ಮೊದಲಿನ ₹ 35 ಸಾವಿರ ಸೇರಿ ₹ 1ಲಕ್ಷ ಡ್ರಾ ಮಾಡಬಹುದು ಎಂದು ಹೇಳಲಾಗಿದೆ. ಬ್ಯಾಂಕ್ ಸಿಬ್ಬಂದಿ ಈ ಹಿಂದೆ ₹ 50 ಸಾವಿರ ಹಾಗೂ ₹ 35 ಸಾವಿರ ಹಿಂಪಡೆದ ಗ್ರಾಹಕರಿಗೆ ಮಿಕ್ಕ ₹ 15ಸಾವಿರ ಮಾತ್ರ ಡ್ರಾ ಮಾಡಲು ಅವಕಾಶ ನೀಡಿದರು. ಇದು ಗೊಂದಲಕ್ಕೆ ಕಾರಣವಾಯಿತು’ ಎಂದು ಸ್ಥಳದಲ್ಲಿದ್ದ ಎಸ್ಬಿಎಂ ನಿವೃತ್ತ ನೌಕರ ಕೆ. ಮುರಳೀಧರ ತಿಳಿಸಿದರು.
ಗೊಂದಲ ಪರಿಹಾರವಾದ ಬಳಿಕ ನಾಲ್ಕು ಕೌಂಟರ್ಗಳನ್ನು ವ್ಯವಸ್ಥೆ ಮಾಡಿ ತ್ವರಿತಗತಿಯಲ್ಲಿ ಹಣ ವಿತರಣೆಗೆ ವ್ಯವಸ್ಥೆ ಮಾಡಲಾಯಿತು.
ಸದ್ಯ ₹ 1 ಲಕ್ಷದವರೆಗೆ ಹಣ ಹಿಂಪಡೆಯಲು ಅವಕಾಶ ನೀಡಿರುವುದರಿಂದ ಶೇ 54ರಷ್ಟು ಗ್ರಾಹಕರು ತಮ್ಮ ಖಾತೆಯಿಂದ ಪೂರ್ಣ ಹಣ ತೆಗೆಯಲು ಸಾಧ್ಯವಾಗಲಿದೆ. ಉಳಿದಂತೆ ಎಲ್ಲ ಷರತ್ತುಗಳು ಮುಂದುವರಿಯಲಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಸಾವಿರಾರು ಗ್ರಾಹಕರು ಒಟ್ಟು ₹ 2000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ್ದಾರೆ. ₹ 1400 ಕೋಟಿ ಅವ್ಯವಹಾರ ನಡೆಸಿದ ಆರೋಪವು ವಜಾಗೊಂಡಿರುವ ಬ್ಯಾಂಕ್ ಆಡಳಿತ ಮಂಡಳಿ ಮೇಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.