ಬೆಂಗಳೂರು: ಸಂತ ಜೋಸೆಫರ ಬಾಲಕರ ಪ್ರೌಢಶಾಲೆಯ ಹಳೆಯವಿದ್ಯಾರ್ಥಿಗಳಾಗಿದ್ದ,ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತೀಯ ವಾಯುಪಡೆಯ ಲೆಫ್ಟಿನೆಂಟ್ ಬಾಬುಲ್ ಗುಹಾ ಮತ್ತು ಲೆಫ್ಟಿನೆಂಟ್ ಕೃಷ್ಣಕುಮಾರ್ ಮೋಹನ್ ಅವರಿಗೆ ಶುಕ್ರವಾರ ಗೌರವ ನಮನ ಸಲ್ಲಿಸಲಾಯಿತು.
ಸಂತ ಜೋಸೆಫರ ಪ್ರೌಢಶಾಲೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘದಿಂದ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಲೆಫ್ಟಿನೆಂಟ್ ಗುಹಾ 1952ರಲ್ಲಿ, ಲೆಫ್ಟಿನೆಂಟ್ ಮೋಹನ್ 1959ರಲ್ಲಿ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಪ್ರಸ್ತುತ ಶಾಲೆಯ 15 ಹಳೆಯ ವಿದ್ಯಾರ್ಥಿಗಳು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ.ಪ್ರವೀಣ್ ರಾಡ್ರಿಗ್ಸ್ ಮಾಹಿತಿ ನೀಡಿದರು.
ಶಾಲೆಯಲ್ಲಿ 1921ರಲ್ಲಿ ಯುದ್ಧ ಸ್ಮಾರಕವನ್ನು ಉದ್ಘಾಟಿಸಲಾಗಿತ್ತು. ಇದರಲ್ಲಿ ಹುತಾತ್ಮರಾದ ಎಲ್ಲಾ ವಿದ್ಯಾರ್ಥಿಗಳ ಹೆಸರುಗಳಿವೆ ಎಂದು ಹೇಳಿದರು.
ಲೆಫ್ಟಿನೆಂಟ್ ಬಾಬುಲ್ ಗುಹಾ ಅವರ ಮಗ, ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಅರಿಂದಮ್ ಸಿನ್ಹಾ ಮಾತನಾಡಿ, ವಾಯುಪಡೆ ಪಯಣದಲ್ಲಿ ತಮ್ಮ ತಂದೆ ಸೇವೆಯನ್ನು ಹೆಮ್ಮೆಯಿಂದ ಹೇಳಿಕೊಂಡರು. 68ನೇ ಪೈಲಟ್ಗಳ ತಂಡದಲ್ಲಿ ತರಬೇತಿ ಪಡೆದು, ಅದಂಪುರದ ಸ್ಕ್ವಾಡ್ರನ್ 1ರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
1965ರ ಯುದ್ಧದಲ್ಲಿ ನಾಲ್ಕು ವಿಮಾನಗಳು ಭಾಗವಹಿಸಬೇಕಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಕೇವಲ ಎರಡು ಯುದ್ಧ ವಿಮಾನಗಳು ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ದಾಳಿ ಮಾಡಿದವು. ಆಗ ಕ್ಷಿಪಣಿ ದಾಳಿಯಿಂದ ಬಾಬುಲ್ ಗುಹಾ ಹುತಾತ್ಮರಾದರು ಎಂದು ಸ್ಮರಿಸಿದರು.
ಏರ್ ಮಾರ್ಷಲ್ ರಾಜಕುಮಾರ್ ಮಾತನಾಡಿದರು. ಲೆಫ್ಟಿನೆಂಟ್ ಕೃಷ್ಣಕುಮಾರ್ ಮೋಹನ್ ಅವರ ಪತ್ನಿ ಕವಿತಾ ಮೋಹನ್ ಮತ್ತು ಅವರ ಮಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.