ಬೆಂಗಳೂರು: ಭಾರತದ ರೈಲುನಿಲ್ದಾಣಗಳಲ್ಲಿ ಯಾವುದೋ ಶಕ್ತಿ ಅಡಗಿದೆ. ನಿಲ್ದಾಣಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದವರು ದೇಶದಲ್ಲೇ ಹೆಸರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಸಪ್ನ ಬುಕ್ಹೌಸ್ ಸಂಸ್ಥಾಪಕ ದಿ.ಸುರೇಶ್ ಸಿ ಷಾ ಅವರಿಗೆ ಹಮ್ಮಿಕೊಂಡಿದ್ದ ಗೌರವ ನಮನ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈಲುನಿಲ್ದಾಣದಲ್ಲಿ ಚಹಾ ಮಾರಿಕೊಂಡಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದ್ದಾರೆ. ಮುಂಬೈನ ರೈಲುನಿಲ್ದಾಣದಲ್ಲಿ ಕೂಲಿಯಾಗಿದ್ದ ಸುರೇಶ್ ಷಾ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಪುಸ್ತಕ ಭಂಡಾರ ಸ್ಥಾಪಿಸಿದರು. ಕರ್ನಾಟಕದ ಮನೆಮಾತಾದರು ಎಂದು ಸ್ಮರಿಸಿದರು.
ರಾಜ್ಯದ ಹಲವರನ್ನು ಓದುಗರಾಗಿ ಪರಿವರ್ತಿಸಿ,ಸಮಾಜದ ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಸುರೇಶ್ ಷಾ ಅವರ ಕೊಡುಗೆ ಇದೆ. ಹಲವು ಚಿಂತಕರು, ಸಾಹಿತಿಗಳು, ಬರಹಗಾರರ ಅಕ್ಷರಗಳಿಗೆ ಪುಸ್ತಕರೂಪ ಕೊಟ್ಟ ಶ್ರೇಯ ಅವರಿಗೆ ಸಲ್ಲುತ್ತದೆ. ಅವರ ಸಾಧನೆಯ ಹಿಂದೆ ಅಪಾರ ಪರಿಶ್ರಮ ಎದ್ದುಕಾಣುತ್ತದೆ ಎಂದು ಶ್ಲಾಘಿಸಿದರು.
ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಸುರೇಶ್ ಷಾ ಅವರು ಬೆಂಗಳೂರಿನಲ್ಲಿ ಸಪ್ನ ಮಳಿಗೆ ತೆರೆಯದೇ ಹೋಗಿದ್ದರೆ ಕನ್ನಡ ಪುಸ್ತಕಲೋಕದಲ್ಲಿ ಶೂನ್ಯ ಅಥವಾ ಅರೆ ವಾತಾವರಣ ನಿರ್ಮಾಣವಾಗುತ್ತಿತ್ತು. 7 ಸಾವಿರ ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು ಎಂದರು.
ಸಾಹಿತಿ ಹಂ.ಪ.ನಾಗರಾಜಯ್ಯ, ಲೇಖಕಿ ನಿರ್ಮಲ ಗೋವಿಂದರಾಜನ್, ಸಪ್ನ ಬುಕ್ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ನಿರ್ದೇಶಕರಾದ ರಾಜೇಶ್ ಮೆಹ್ತಾ ಉಪಸ್ಥಿತರಿದ್ದರು.