ಯಲಹಂಕ: ಮಕ್ಕಳಿಗೆ ಸದ್ಗುಣಗಳನ್ನು ಕಲಿಸುವುದೇ ನಿಜವಾದ ಶಿಕ್ಷಣ. ಯುವ ಸಮುದಾಯವನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಹೆಬ್ಬಾಳ ಕೆಂಪಾಪುರದಲ್ಲಿನ ಸಿಂಧಿ ಕಾಲೇಜಿನಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಕಟ್ಟಡದಿಂದ ಗುರುತಿಸಲ್ಪಡುವುದಿಲ್ಲ ಎಂದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ, ಸಮಾಜ, ದೇಶವನ್ನು ಗೌರವಿಸಿ, ಪ್ರೀತಿಸುವ ವ್ಯಕ್ತಗಳಾದರೆ ಮಾತ್ರ ಶಿಕ್ಷಣ ಪಡೆದುದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಅತ್ಯುತ್ತಮ ಸೇವೆ ಸಲ್ಲಿಸಿದ ನಾಲ್ವರು ಪ್ರಾಂಶುಪಾಲರು ಹಾಗೂ 14 ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷ ಜಿ.ಬಿ.ಶಿವರಾಜ್, ಸಿಂಧಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಆರ್.ನಾರಂಗ್, ಪ್ರಾಂಶುಪಾಲ ಬಿ.ಎಸ್. ಶ್ರೀಕಂಠ, ಉಪಪ್ರಾಂಶುಪಾಲರಾದ ಎನ್.ಆಶಾ ಇದ್ದರು.