ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಶಿಯಾಫತ್ ಉನ್ನೀಸಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪದಡಿ ಪತಿ ನೂರುಲ್ಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಸೋಮವಾರ ಈ ಕೊಲೆ ನಡೆದಿದೆ. ಕೆಲವೇ ಗಂಟೆಗಳಲ್ಲಿ ಪತಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಉನ್ನೀಸಾ ಹಾಗೂ ನೂರುಲ್ಲಾ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ದಂಪತಿ ನಡುವೆ ಇತ್ತೀಚೆಗೆ ಜಗಳ ಶುರುವಾಗಿತ್ತು. ಪತ್ನಿ ಮನೆ ಬಿಟ್ಟು ಹೋಗಿ ಬೇರೆಡೆ ವಾಸವಿದ್ದರು. ನೂರುಲ್ಲಾ ಪತ್ನಿಗೆ ತಲಾಖ್ ನೀಡಿದ್ದ.’
‘ತಲಾಖ್ ನೀಡಿದ್ದರಿಂದ ಉನ್ನೀಸಾ ಅವರು ಪತಿಯ ಮನೆಯಲ್ಲಿದ್ದ ಸಾಮಗ್ರಿಗಳನ್ನು ತರಲು ಹೋಗಿದ್ದರು. ಇದೇ ಸಂದರ್ಭದಲ್ಲಿಯೇ ಆರೋಪಿ ನೂರುಲ್ಲಾ, ಪತ್ನಿ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.