ಬೆಂಗಳೂರು: ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
‘ರಾಜೇಶ್, ಲೋಕೇಶ್, ಗೋವಿಂದರಾಜು ಹಾಗೂ ಎಂ.ಎಸ್. ರವಿ ಬಂಧಿತರು. ಅವರಿಂದ ₹ 9.79 ಕೋಟಿ ಮೌಲ್ಯದ 178 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಚನ್ನಸಂದ್ರದ ಕಲಾ ಫಾರ್ಮ್ನಲ್ಲಿದ್ದ 2 ಶ್ರೀಗಂಧದ ಮರಗಳನ್ನು ಕಳೆದ ಸೆಪ್ಟೆಂಬರ್ 11ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
’ಕಲಾ ಫಾರ್ಮ್ ಬಳಿ ಬೆಳಿಗ್ಗೆ ಓಡಾಡಿದ್ದ ಆರೋಪಿಗಳು, ಶ್ರೀಗಂಧ ಮರ ಇದ್ದ ಬಗ್ಗೆ ತಿಳಿದುಕೊಂಡಿದ್ದರು. ರಾತ್ರಿ ವೇಳೆ ಕಲಾ ಫಾರ್ಮ್ಗೆ ನುಗ್ಗಿ ಮರ ಕಡಿದು ಸಾಗಿಸಿದ್ದರು’ ಎಂದೂ ಹೇಳಿದರು.