ಬೆಂಗಳೂರು: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು–ಮಿಂಚು ಸಹಿತ ಹಗುರವಾಗಿ ಮಳೆಯಾಗಿದೆ.
ಬನಶಂಕರಿ, ಹಂಪಿನಗರ, ವಿಜಯನರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಯಿತು. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು 10 ನಿಮಿಷ ಸಾಧಾರಣ ಮಳೆಯಾಗಿದೆ.
ಈ ವರ್ಷದಲ್ಲಿ ನಗರದ ಎಲ್ಲೆಡೆಯೂ ಮಳೆಯಾಗಿರುವುದು ಇದೇ ಮೊದಲು. ಗುರುವಾರ ಬೆಳಿಗ್ಗೆಯಿಂದಲೇ ಮೋಡ ಹಾಗೂ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದು ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು 7.30ರ ವೇಳೆಯಲ್ಲಿ ನಗರದಲ್ಲಿ ಮಳೆಯಾಯಿತು.
ಫೋಟೊ ಸಂಭ್ರಮ: ವರ್ಷದಲ್ಲಿ ಮೊದಲ ಬಾರಿಗೆ ನಗರಕ್ಕೆ ಮಳೆಯ ಸಿಂಚನವಾಗಿದ್ದು, ನಾಗರಿಕರು ಹರ್ಷಪಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ಚಿತ್ರ ಹಾಗೂ ಮಳೆಯಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡರು.
ಮಳೆ ಇನ್ನಷ್ಟು ಸುರಿಯಲಿ, ರಾತ್ರಿಯೆಲ್ಲ ಸುರಿಯಲಿ... ಎಂಬ ಅಭಿಲಾಷೆ ವ್ಯಕ್ತವಾಗಿತ್ತು. ಆದರೆ, ಗುಡುಗು, ಮಿಂಚಿನ ಆರ್ಭಟವಿದ್ದರೂ ಸುಮಾರು 10 ನಿಮಿಷ ಮಾತ್ರ ಮಳೆಯಾಯಿತು. ಹೀಗಾಗಿ, ‘ಕಾದ ಹೆಂಚಿನ ಮೇಲೆ ನೀರೆರಿಚಿದಂತಾಯಿತು ನಗರದ ಸ್ಥಿತಿ’ ಎಂಬ ಮಾತುಗಳೂ ಕೇಳಿಬಂದವು.