ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ಹಳ್ಳಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಬೆಂಗಳೂರಿನ ಟೆಕಿಗಳು

Last Updated 18 ಮಾರ್ಚ್ 2020, 8:01 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಬೆಂಗಳೂರಿನ ಕಂಪನಿಯೊಂದರ ಟೆಕಿಗಳು ಈಗ ಹಳ್ಳಿಯೊಂದರಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಭೀತಿಯಿಂದಾಗಿ ಬಹುತೇಕ ಮಂದಿ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಆಯ್ದುಕೊಂಡಾಗಈ ಟೆಕಿಗಳ ಗುಂಪು ತಮಿಳುನಾಡಿನ ಹಳ್ಳಿಯೊಂದರಲ್ಲಿ ಕುಳಿತು ಕೆಲಸ ಮುಂದುವರಿಸಿದೆ.

ತಮಿಳುನಾಡಿನ ಥೇಣಿ ಜಿಲ್ಲೆಯ ತೇವರಂ ಮತ್ತು ಹನುಮಂತನ್‌ಪಟ್ಟಿ ಗ್ರಾಮದಲ್ಲಿ ಈ ಟೆಕಿಗಳು ವಾಸ್ತವ್ಯ ಹೂಡಿದ್ದು, ತೆಂಗಿನ ತೋಟದ ಮಧ್ಯೆ ಕುಳಿತು ತಮ್ಮ ದೈನಂದಿನ ಕೆಲಸವಾದ ಕೋಡಿಂಗ್ ಮಾಡುತ್ತಿದ್ದಾರೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಮೂಲದ ಸ್ಟಾರ್ಟ್‌ಅಪ್ ಕಂಪನಿ ಇನ್‌ಸ್ಟಾಕ್ಲೀನ್, ತಮ್ಮ ಕಚೇರಿಯನ್ನು ಥೇಣಿ ಜಿಲ್ಲೆಯ ಗ್ರಾಮ ಪ್ರದೇಶಕ್ಕೆ ಸ್ಥಳಾಂತರಿಸಿದೆ. ಬೆಂಗಳೂರಿನಿಂದ ಸುಮಾರು450 ಕಿಮೀ ದೂರ ಹೋಗಿ ಕೆಲಸ ಮಾಡುತ್ತಿರುವ ಈ ತಂಡ ಕೊರೊನಾ ಭೀತಿಯಿಂದ ಮುಕ್ತವಾಗಿದೆ.ಅಷ್ಟೇ ಅಲ್ಲದೆ ಪ್ರಕೃತಿ ಮಡಿಲಲ್ಲಿ ಕುಳಿತು ಕೆಲಸ ಮಾಡುವ ಸುಖ ಅನುಭವಿಸುತ್ತಿದೆ.

ಪ್ರಸ್ತುತ ಕಂಪನಿಯ ಅರ್ಧದಷ್ಟು ನೌಕರರು ಅಂದರೆ 20 ಮಂದಿ ಥೇಣಿಯಲ್ಲಿರುವ ತೋಟದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ನೌಕರರು ಬೆಂಗಳೂರು ನಿವಾಸಿಗಳೇ ಆಗಿರುವುದರಿಂದ ಕುಟುಂಬದವರ ಜತೆ ಇಲ್ಲೇ ಇದ್ದಾರೆ. ಕಂಪನಿಯ ಸಹ ಸಂಸ್ಥಾಪಕರೊಬ್ಬರು ಅಮೆರಿಕಕ್ಕೆ ಹೋಗಿ ಅಲ್ಲಿಯೇ ಬಾಕಿಯಾಗಿದ್ದಾರೆ.

ಥೇಣಿಯನ್ನೇ ಆಯ್ಕೆ ಮಾಡಿದ್ದು ಯಾಕೆ?
ಕಂಪನಿಯ ಸಿಇಒ ಮತ್ತುಸಹ ಸಂಸ್ಥಾಪಕ ಅರವಿಂದ ರಾಜು ಇಲ್ಲಿಯವರೇ ಆಗಿದ್ದಾರೆ. ಕೊರೊನಾ ಸೋಂಕು ತಗಲುವ ಭೀತಿ ಇಲ್ಲದೆ ಕೆಲಸ ಮಾಡುವುದಕ್ಕಾಗಿ ಅರವಿಂದ ಅವರು ತಮ್ಮ ಊರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಅರವಿಂದ ಅವರ ಅಜ್ಜಿ ಮನೆಯ ಗೇರು ತೋಟದಲ್ಲಿ ಕುಳಿತು ಕೆಲವು ದಿನಗಳ ಕಾಲ ಕೆಲಸ ಮಾಡಿದ ಈ ತಂಡ ಈಗ ಹನುಮಂತನ್‌ಪಟ್ಟಿಯಲ್ಲಿರುವ ತೆಂಗು ತೋಟದಲ್ಲಿ ತಮ್ಮ ಕಾರ್ಯ ಮುಂದುವರಿಸಿದೆ .

ರೋಗಕ್ಕಿಂತ ಹೆಚ್ಚು ಸೋಂಕು ಭೀತಿ ಮತ್ತು ಆತಂಕ ಇದ್ದುದರಿಂದ ನಾವು ಬೆಂಗಳೂರು ಬಿಟ್ಟು ಬಂದೆವು. ಕೊರೊನಾ ವೈರಸ್‌ ಬಗ್ಗೆ ಬೆಂಗಳೂರಿನಲ್ಲಿ ಆತಂಕ ತಲೆದೋರಿದ ಹೊತ್ತಲ್ಲಿ ಅಂದರೆ ಮಾರ್ಚ್ ತಿಂಗಳ ಮೊದಲವಾರವೇ ನಾವು ಬೆಂಗಳೂರಿನಿಂದ ಇಲ್ಲಿಗೆ ಬಂದೆವು. ಥೇಣಿಯಲ್ಲಿ ಯಾರೂ ಮಾಸ್ಕ್ ಧರಿಸುವುದಿಲ್ಲ, ಉಸಿರಾಡಲು ಶುದ್ಧ ವಾಯು ಇದೆ. ಅಷ್ಟೇ ಅಲ್ಲದೆ ಕೊರೊನಾ ಭೀತಿಯೂ ಇಲ್ಲ ಎಂದು 'ಪ್ರಜಾವಾಣಿ' ಜತೆ ಮಾತನಾಡಿದ ರಾಜು ಹೇಳಿದ್ದಾರೆ.

ಮೊದಮೊದಲು ಇಲ್ಲಿ ಇಂಟರ್‌ನೆಟ್ ವೇಗ ತುಂಬಾ ಕಡಿಮೆಯಾಗಿತ್ತು. ಹಾಗಾಗಿ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಹೋಗುತ್ತಿದ್ದೆವು. ಈಗ ಇಂಟರ್‌ನೆಟ್ ಸಂಪರ್ಕ ವೇಗವಾಗಿ ಸಿಗುವ ಜಾಗ ಗೊತ್ತಿದೆ. ಪ್ರಕೃತಿ ರಮಣೀಯವಾದ ಪರಿಸರ ಮತ್ತು ಮನೆಯ ಊಟ ಸೇವಿಸುವ ಕಾರಣ ಸಹೋದ್ಯೋಗಿಗಳಿಗೆ ಕೆಲಸ ಮಾಡುವ ಉತ್ಸಾಹ ಹೆಚ್ಚಿದೆ.

ಪಿಜ್ಜಾ, ಬರ್ಗರ್ ಬದಲು ಮನೆಯೂಟ ಸಿಗುತ್ತದೆ. ಮಿಲ್ಕ್ ಶೇಕ್ ಮತ್ತು ಸಾಫ್ಟ್ ಡ್ರಿಂಕ್ಸ್ ಬದಲು ಎಳನೀರು ಕುಡಿಯುತ್ತೇವೆ. ಹಳ್ಳಿ ಬದುಕು ನಮ್ಮ ಜೀವನ ಶೈಲಿಯನ್ನೂಬದಲಿಸಿದೆ ಎಂದು ರಾಜುಹೇಳಿದ್ದಾರೆ.

ನಗರ ಜೀವನಕ್ಕೆ ಒಗ್ಗಿ ಹೋಗಿದ್ದ ಜೀವನ ಶೈಲಿಯಲ್ಲಿ ಬದಲಾವಣೆಯಾಗಿದೆ. ನಾವು ಬೆಳಗ್ಗೆ ಎದ್ದು 7 ಗಂಟೆ ಕೆಲಸ ಮಾಡುತ್ತೇವೆ. 8 ಗಂಟೆಗಳ ಕಾಲ ನಿದ್ದೆ ಮಾಡುತ್ತೇವೆ. 9 ಗಂಟೆಗಳು ನಮಗಾಗಿಯೇ ಮೀಸಲು. ಪಶ್ಚಿಮ ಘಟ್ಟಗಳ ಹಳ್ಳಿ ಬದುಕಿನ ಜತೆ ನಮ್ಮ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದು ಇಲ್ಲಿ ಕೆಲಸ ಮಾಡುತ್ತಿರುವ ಟೆಕಿಯೊಬ್ಬರು ಹೇಳಿದ್ದಾರೆ.

ಇಮೇಲ್‌ಗಳಲ್ಲಿ ಅಗತ್ಯಮತ್ತು ಅನಗತ್ಯವಾದ ಇಮೇಲ್‌ಗಳನ್ನು ಬೇರ್ಪಡಿಸಿ ಇನ್‌ಬಾಕ್ಸ್‌ಗೆ ಬರುವಂತೆ ಸಹಾಯ ಮಾಡುವ ಮೊಬೈಲ್ ಆ್ಯಪ್‌ನ್ನು ಸಿದ್ಧಪಡಿಸಿದ ಕಂಪನಿಯಾಗಿದೆ ಇನ್‌ಸ್ಟಾಕ್ಲೀನ್.

ತೋಟದಲ್ಲಿ ಅಥವಾ ಹಳ್ಳಿಯಲ್ಲಿ ಕುಳಿತು ಕೆಲಸ ಮಾಡಬೇಕು ಎಂಬ ಆಸೆ ಅರವಿಂದ ರಾಜು ಅವರ ಮನಸ್ಸಲ್ಲಿ ಇತ್ತು. ಇಂತಿರುವಾಗ ಕೊರೊನಾ ಭೀತಿ ಸೃಷ್ಟಿಯಾದಾಗ ಬೇರೇನೂ ಯೋಚಿಸಿದೆ ತಮ್ಮ ಕಂಪನಿಯನ್ನು ಹಳ್ಳಿಗೆ ಸ್ಥಳಾಂತರಿಸಿದರು.

ತಾಂತ್ರಿಕ ಕೆಲಸದ ಜತೆಗೆ ಪರಿಸರ ಕಾಳಜಿಯನ್ನೂ ಈ ತಂಡ ಮಾಡುತ್ತಿದೆ. ಮಾರ್ಚ್ ತಿಂಗಳಿನಿಂದ ಪ್ರಸ್ತುತ ಕಂಪನಿಯ ಎಷ್ಟು ಆ್ಯಪ್ ಡೌನ್‌ಲೋಡ್ ಆಗುತ್ತದೊ ಅಷ್ಟೇ ಗಿಡಗಳನ್ನು ಇವರು ನೆಡಲಿದ್ದಾರೆ. ನಾವು ಕೆಲಸ ಮಾಡಿದ ಗ್ರಾಮದಲ್ಲಿಯೇ ನಾವು ಗಿಡಗಳನ್ನು ನೆಡಲಿದ್ದೇವೆ ಎಂದು ಅರವಿಂದ ರಾಜುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT