ಕೆ.ಆರ್.ಪುರ: ನಗರದಲ್ಲಿ ಟೋಯಿಂಗ್ ನಡೆಸುವವರು ಸಾರ್ವಜನಿಕರ ಬಳಿ ಸಭ್ಯತೆಯಿಂದ ನಡೆದುಕೊಳ್ಳಬೇಕು. ಅಸಭ್ಯ ವರ್ತನೆ ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ರಾಮಮೂರ್ತಿನಗರದಲ್ಲಿ ಕೆ.ಆರ್.ಪುರ ಸಂಚಾರ ಠಾಣೆ ವತಿಯಿಂದ ಬೆಂಗಳೂರು ನಗರ ಸಂಚಾರ ಪೋಲಿಸ್ ಪೂರ್ವ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಚಾರ ಸಂಪರ್ಕ ದಿನ ಹಾಗೂ ಸಂಚಾರ ಸಮಸ್ಯೆಗಳು ನಿಮ್ಮ ಅಹವಾಲು ಮತ್ತು ಪರಿಹಾರ ಕುರಿತು ಚರ್ಚೆಯಲ್ಲಿ ಮಾತನಾಡಿದರು.
ಟೋಯಿಂಗ್ ಗುತ್ತಿಗೆದಾರರು ಸಾರ್ವಜನಿಕರ ಜೊತೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಟೋಯಿಂಗ್ ವಾಹನಗಳ ಹಿಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೊಸದಾಗಿ ಅಳವಡಿಸಲಾಗುತ್ತದೆ. ಯಾರೂ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕೆ.ಆರ್.ಪುರ ಜಂಕ್ಷನ್ನಲ್ಲಿ ಅತಿಯಾದ ಸಂಚಾರ ದಟ್ಟಣೆ ಉಲ್ಬಣಗೊಳ್ಳುತ್ತಿದೆ. ಇಲ್ಲಿನ ಬಾರ್ ಆ್ಯಂಡ್ ರೆಸ್ಟೋರೆಂಟ್ನವರು ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ ಸಂಚಾರ ದಟ್ಟಣೆ ಕಾರಣವಾಗುತ್ತಿದ್ದಾರೆ. ಫುಟ್ಪಾತ್ ನಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತಿವೆ. ಬಸ್ ಆಟೋಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಜಂಟಿ ಕಮಿಷನರ್ (ಸಂಚಾರ) ಬಿ.ಆರ್. ರವಿಕಾಂತೇಗೌಡ, ಸಂಚಾರ ಪೂರ್ವ ವಿಭಾಗದ ಎಸಿಪಿ ಕೆ. ಎಂ. ಶಾಂತರಾಜು, ಕೆ.ಆರ್.ಪುರ ಸಂಚಾರಿ ಠಾಣಾಧಿಕಾರಿ ಎಂ.ಎ. ಮೊಹಮ್ಮದ್, ರಾಮಮೂರ್ತಿ ನಗರ ಠಾಣಾಧಿಕಾರಿ ಮೆಲ್ವಿನ್ ಇದ್ದರು.