ಬೆಂಗಳೂರು: ‘ಒಬ್ಬ ಸಾಮಾನ್ಯ ಮನುಷ್ಯ ಸೋಲೊಮನ್ನ ಬುದ್ಧಿವಂತಿಕೆ ಅಥವಾ ತರಬೇತಿ ಪಡೆದ ಷರ್ಲಾಕ್ ಹೋಮ್ಸ್ನ ದೃಷ್ಟಿ ಪಡೆದಿರುವುದಿಲ್ಲ ಎಂಬುದನ್ನು ಅಧೀನ ನ್ಯಾಯಾಲಯಗಳು ಸದಾ ನೆನಪಿಟ್ಟುಕೊಳ್ಳಬೇಕು’ ಎಂದು ಹೈಕೋರ್ಟ್ ಹೇಳಿದೆ.
ಟ್ರೇಡ್ಮಾರ್ಕ್ ವಿವಾದದ ಬಗ್ಗೆ ಮರು ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶಿಸಿದ ಪೀಠ, ಈ ಅಭಿಪ್ರಾಯಪಟ್ಟಿತು.
‘ಮಾತೃವೇದ’ ಟ್ರೇಡ್ ಮಾರ್ಕ್ ‘ಮಾತೃ ಆಯುರ್ವೇದ’ಕ್ಕೆ ಹೋಲುತ್ತದೆ ಎಂಬ ಕಾರಣಕ್ಕೆ ‘ಮಾತೃವೇದ’ ಕಂಪನಿಗೆ 18ನೇ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯವು 2020ರ ಡಿಸೆಂಬರ್ 21 ರಂದು ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.
‘ಟ್ರೇಡ್ಮಾರ್ಕ್ ಕಾಯ್ದೆ ಪ್ರಕಾರ ಹೆಸರು ಸಂಪೂರ್ಣ ಭಿನ್ನವಾಗಿದೆ. ಟ್ರೇಡ್ಮಾರ್ಕ್ಗಳು ಗೊಂದಲ ಉಂಟು ಮಾಡುವ ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಷ್ಟೇ’ ಎಂದು ತಿಳಿಸಿದ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ಪೀಠ, ಹೊಸದಾಗಿ ವಿಚಾರಣೆ ನಡೆಸಲು ಸೂಚಿಸಿತು.