ಬೆಂಗಳೂರು: 'ಬಡವರು ಬಡವರಾಗಿಯೇ ಉಳಿಯಬಾರದು. ಎಲ್ಲರಿಗೂ ಸಮಾನ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಗರದ ಪ್ರತಿಯೊಂದು ಕೊಳೆಗೇರಿಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದು ನಮ್ಮ ಕರ್ತವ್ಯ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ನಲ್ಲಿ ವಿವಿಧ ಕಾಮಗಾರಿಗಳನ್ನುಶನಿವಾರ ಪರಿಶೀಲನೆ ನಡೆಸಿ, ಅವರು ಮಾತನಾಡಿದರು.
'ಅಗ್ರಹಾರ ದಾಸರಹಳ್ಳಿ ವಾರ್ಡ್ನಲ್ಲಿ ₹6 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಕ್ಕುಪತ್ರ ಇಲ್ಲದ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಮನೆ ನಿರ್ಮಾಣಕ್ಕಾಗಿ ನಿಗದಿ ಮಾಡಿರುವ ಜಾಗದಲ್ಲಿ 140ಕ್ಕೂ ಹೆಚ್ಚು ಮನೆಗಳನ್ನು ಶೀಘ್ರವೇ ನಿರ್ಮಿಸಲಾಗುವುದು' ಎಂದರು.
ಪಾಲಿಕೆ ಸದಸ್ಯೆ ಶಿಲ್ಪಾ ಶ್ರೀಧರ್, 'ಸಚಿವರ ನೆರವಿನಿಂದ ವಾರ್ಡ್ನಲ್ಲಿ ಉದ್ಯಾನಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಸುವ್ಯವಸ್ಥಿತ ಚರಂಡಿ, ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ' ಎಂದರು.
ಬನಶಂಕರಿಯ ದೇವಸ್ಥಾನದ ಹತ್ತಿರ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು, ಕೆ.ಎಚ್.ಬಿ ಕಾಲೊನಿಯ ಕೊಳೆಗೇರಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ತಲಾ ₹15 ಸಾವಿರ ಮೊತ್ತದ ಚೆಕ್ ವಿತರಿಸಿದರು. 30 ಜನರಿಗೆ ಸೋಲಾರ್ ಹೀಟರ್ ಉಪಕರಣ ವಿತರಿಸಿದರು. ಬಸವನ ಪಾರ್ಕ್, ಕ್ರೀಡಾ ಸಂಕೀರ್ಣ, ಜ್ಞಾನ ಮಂದಿರ ಕಾಮಗಾರಿಗಳನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.