ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿನ ವರ್ತೂರು ಕೆರೆಯಲ್ಲಿನ ಹೂಳು ತೆಗೆಯಲಾಗಿದ್ದು, ಇದು ಕೃಷಿ ಜಮೀನಿಗೆ ಉಪಯೋಗಿಸಲು ಸೂಕ್ತವಾಗಿದೆ. ರೈತರು ಇದನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಹೂಳು ತೆಗೆಯಲಾಗಿತ್ತು. ಈ ಪೈಕಿ ವರ್ತೂರು ಕೆರೆಯಲ್ಲಿನ ಹೂಳಿನ ಗುಣಮಟ್ಟ ಉತ್ತಮವಾಗಿದ್ದು, ಇದನ್ನು ಕೃಷಿ ಜಮೀನುಗಳಿಗೆ ಬಳಸಲು ಸೂಕ್ತವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ.
ಈ ಕೆರೆಯ ನಿರ್ವಹಣೆಯನ್ನು ಬಿಡಿಎ ನೋಡಿಕೊಳ್ಳುತ್ತಿದ್ದು, ಸಾರ್ವಜನಿಕರು ಅಗತ್ಯಕ್ಕನುಸಾರ ಕೆರೆಯ ಹೂಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಕೆರೆಯ ಸುತ್ತಮುತ್ತಲಿನ ರೈತರು ಇದರ ಸದುಪಯೋಗವನ್ನು ಪಡೆಯಬಹುದು.
ಮಾಹಿತಿಗೆ, ಪ್ರಾಧಿಕಾರದ ಸಹಾಯಕ ಎಂಜಿನಿಯರ್ (9448600709), ಸಹಾಯಕ ಕಾರ್ಯಪಾಲಕ ಎಂಜಿನಿಯರ್ (9743938431) ಮತ್ತು ಕಾರ್ಯಪಾಲಕ ಎಂಜಿನಿಯರ್ ಅವರನ್ನು (7349524895) ಸಂಪರ್ಕಿಸಬಹುದು.