ಬೆಂಗಳೂರು: ಪರಿಷತ್ ಚುನಾವಣೆಯ ನಾಮಪತ್ರ ಪರಿಶೀಲನೆಯಲ್ಲಿ ಕಾಂಗ್ರೆಸ್ ನ ನಜೀರ್ ಅಹಮದ್, ಎಂ.ಸಿ. ವೇಣುಗೋಪಾಲ್ ಮತ್ತು ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ನಾಮಪತ್ರ ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಎಂ.ಎಸ್. ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಗಳಾದ ಟಿ.ಆರ್. ಹರಿಶ್ಚಂದ್ರ ಗೌಡ ಮತ್ತು ವೆಂಕಟೇಶ್ವರ ಮಹಾಸ್ವಾಮೀಜಿ ಕಟಕದೊಂಡ ನಾಮಪತ್ರಗಳು ಸೂಚಕರು ಇಲ್ಲದ ಕಾರಣ ತಿರಸ್ಕಾರಗೊಂಡಿದೆ.
ನಾಮಪತ್ರ ಪರಿಶೀಲನೆ ವೇಳೆ ರಮೇಶ್ ಗೌಡರ ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಕೆಯಾಗಿದೆ, ಆದರರ ಪರಿಶೀಲನೆ ಮುಗಿದ ಬಳಿಕ ಆಕ್ಷೇಪಣೆ ಸಲ್ಲಿಕೆಯಾದ ಕಾರಣ ಆಕ್ಷೇಪಣೆಗೆ ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸೆ. 27ರಂದು ಪರಿಷತ್ ಗೆ ಆಯ್ಕೆಗೊಂಡ ಅಭ್ಯರ್ಥಿಗಳ ಹೆಸರು ಘೋಷಣೆ ಆಗಲಿದೆ. ಈಗಾಗಲೇ ಚುನಾವಣೆಯಿಂದ ಬಿಜೆಪಿ ಹಿಂದೆ ಸರಿದಿದೆ. ಹೀಗಾಗಿ ಎದುರಾಳಿ ಅಭ್ಯರ್ಥಿಗಳು ಇಲ್ಲದೆ ಇರುವ ಕಾರಣ ಕಾಂಗ್ರೆಸ್ನ ಇಬ್ಬರು ಮತ್ತು ಜೆಡಿಎಸ್ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕೆ.ಎಸ್. ಈಶ್ವರಪ್ಪ ಸ್ಥಾನಕ್ಕೆ ನಜೀರ್ ಅಹಮದ್, ಜಿ. ಪರಮೇಶ್ವರ್ ಸ್ಥಾನಕ್ಕೆ ಎಂ.ಸಿ. ವೇಣುಗೋಪಾಲ್ ಮತ್ತು ವಿ. ಸೋಮಣ್ಣ ಸ್ಥಾನಕ್ಕೆ ರಮೇಶ್ ಗೌಡ ನಾಮಪತ್ರಗಳು ಕ್ರಮಬದ್ಧವಾಗಿದೆ.