ಬೆಂಗಳೂರು: ಪರ ಪುರುಷನ ಜೊತೆ ವಾಸವಿದ್ದರೆಂಬ ಕಾರಣಕ್ಕೆ ಪತ್ನಿಯನ್ನು ಕೊಂದು ಎರಡು ವರ್ಷದ ಮಗುವಿಗೆ ಚಾಕುವಿನಿಂದ ಇರಿದಿರುವ ಆರೋಪದಡಿ ಶೇಖ್ ಸುಹೇಲ್ (38) ಎಂಬಾತನನ್ಬನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ಸಾರಾಯಿ ಪಾಳ್ಯದ ಮನೆಯಲ್ಲಿ ತಬ್ಸೇನಾ ಬೇಬಿ (32) ಅವರನ್ನು ಸೋಮವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅವರ ಮಗು ನಯೀಮ್ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ತಬ್ಸೇನಾ ತಂಗಿ ನೀಡಿರುವ ದೂರು ಆಧರಿಸಿ, ಪತಿ ಶೇಖ್ ಸುಹೇಲ್ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
14 ವರ್ಷಗಳ ಹಿಂದೆ ಮದುವೆ: ‘ಪಶ್ಚಿಮ ಬಂಗಾಳದ ಸುಹೇಲ್ ಹಾಗೂ ತಬ್ಸೇನಾ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೆಲಸ ಹುಡುಕಿಕೊಂಡು 2013ರಲ್ಲಿ ಬೆಂಗಳೂರಿಗೆ ಬಂದಿದ್ದರು. ಕೆ.ಜಿ. ಹಳ್ಳಿಯಲ್ಲಿ ವಾಸವಿದ್ದರು. ಸುಹೇಲ್, ಟೈಲರ್ ಆಗಿದ್ದ. ತಬ್ಸೇನಾ, ಮನೆ ಕೆಲಸಕ್ಕೆ ಹೋಗಿ ಬರುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮದ್ಯವ್ಯಸನಿ ಆಗಿದ್ದ ಸುಹೇಲ್, ಪತ್ನಿ ಜೊತೆ ನಿತ್ಯವೂ ಜಗಳ ಮಾಡುತ್ತಿದ್ದ. ಬೇಸತ್ತ ತಬ್ಸೇನಾ, ತವರು ಮನೆಗೆ ಹೋಗುವುದಾಗಿ ಹೇಳಿದ್ದರು. ಸಿಟ್ಟಾಗಿದ್ದ ಸುಹೇಲ್, ತಾನೇ ಮನೆ ತೊರೆದು ವಾಪಸು ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ನಂತರ, ಮಗು ಜೊತೆ ತಬ್ಸೇನಾ ಪ್ರತ್ಯೇಕವಾಗಿ ವಾಸವಿದ್ದರು’ ಎಂದು ಹೇಳಿದರು.
ತಂಗಿ ಎದುರು ತಬ್ಸೇನಾ ಕೊಲೆ: ‘ಕೆ.ಜಿ. ಹಳ್ಳಿಯ ಯುವಕರೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡಿದ್ದ ತಬ್ಸೇನಾ, ಅವರ ಜೊತೆಯೇ ಮನೆ ಮಾಡಿಕೊಂಡು ವಾಸವಿದ್ದರು. ಈ ಸಂಗತಿ ತವರು ಮನೆಯವರಿಗೂ ಗೊತ್ತಿತ್ತು. ಹೈದರಾಬಾದ್ನಲ್ಲಿದ್ದ ತಂಗಿ
ಇತ್ತೀಚೆಗೆ ಮನೆಗೆ ಬಂದು ಉಳಿದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಸೋಮವಾರ ನಗರಕ್ಕೆ ಬಂದಿದ್ದ ಸುಹೇಲ್, ಪತ್ನಿಗೆ ಕರೆ ಮಾಡಿದ್ದ. ವಿಳಾಸ ತಿಳಿದುಕೊಂಡು ರಾತ್ರಿ ಮನೆಗೆ ಬಂದಿದ್ದ. ಪರ ಪುರುಷನ ಜೊತೆಗಿರುವುದನ್ನು ನೋಡಿ ಜಗಳ ತೆಗೆದಿದ್ದ. ನಂತರ, ತಂಗಿ ಎದುರೇ ಚಾಕುವಿನಿಂದ ಇರಿದು ತಬ್ಸೇನಾ ಅವರನ್ನು ಕೊಲೆ ಮಾಡಿದ್ದ. ಬಳಿಕ, ಮಗುವಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದ.’
’ಮಗುವನ್ನು ಸಂಬಂಧಿಕರೇ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಘಟನೆ ಬಗ್ಗೆ ತಬ್ಸೇನಾ ತಂಗಿ ದೂರು ನೀಡುತ್ತಿದ್ದಂತೆ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.