ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ

ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ
Last Updated 3 ಜುಲೈ 2022, 16:04 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

‘ನೈಸ್ ರಸ್ತೆಗೆ ಹೊಂದಿಕೊಂಡಿರುವ ವಿಶ್ವೇಶ್ವರಯ್ಯ ಬಡಾವಣೆ ಬಳಿಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಅರೆಬೆಂದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ವಯಸ್ಸು 25ರಿಂದ 30 ಇರಬಹುದೆಂದು ಅಂದಾಜಿಸಲಾಗಿದ್ದು, ಹೆಸರು ಗೊತ್ತಾಗಿಲ್ಲ. ಎರಡು ದಿನಗಳ ಹಿಂದೆಯೇ ಯಾರೋ ದುಷ್ಕರ್ಮಿಗಳು, ಮಹಿಳೆಯನ್ನು ಕೊಂದಿರುವ ಅನುಮಾನ ಇದೆ. ಮೃತದೇಹವನ್ನು ತಂದು ಅರಣ್ಯ ಪ್ರದೇಶದಲ್ಲಿ ಸುಟ್ಟು ಹೋಗಿರುವ ಶಂಕೆಯೂ ಇದ್ದು, ತನಿಖೆ ಮುಂದುವರಿಸಲಾಗಿದೆ. ಮೃತದೇಹದ ಫೋಟೊವನ್ನು ಎಲ್ಲ ಠಾಣೆಗಳಿಗೆ ಕಳುಹಿಸಲಾಗಿದ್ದು, ಯಾರಾದರೂ ನಾಪತ್ತೆಯಾದವರು ಇದ್ದರೆ ಮಾಹಿತಿ ನೀಡುವಂತೆಯೂ ಕೋರಲಾಗಿದೆ’ ಎಂದೂ ತಿಳಿಸಿದರು.

‘ಕೆಲ ಸ್ಥಳೀಯರು, ಮೃತದೇಹ ಗಮನಿಸಿ ಠಾಣೆಗೆ ಮಾಹಿತಿ ನೀಡಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ಪ್ರಯೋಗಾಲಯದ ತಜ್ಞರು, ವರದಿ ನೀಡಿದ ಬಳಿಕ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದೂ ಹೇಳಿದರು.

ಸಿಗದ ಸುಳಿವು: ‘ಮೃತದೇಹ ಸಿಕ್ಕ ಸ್ಥಳದಲ್ಲಿ ಹೆಚ್ಚಾಗಿ ಜನ ಓಡಾಡುವುದಿಲ್ಲ. ಜೊತೆಗೆ, ಅಕ್ಕ–ಪಕ್ಕದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇಲ್ಲ. ಹೀಗಾಗಿ, ಮಹಿಳೆ ಕೊಲೆ ಬಗ್ಗೆ ಸದ್ಯಕ್ಕೆ ಸುಳಿವು ಸಿಗುತ್ತಿಲ್ಲ’ ಎಂದು ಪೊಲೀಸರು ತಿಳಿಸಿದರು.

’ಮೃತದೇಹವಿದ್ದ ಸ್ಥಳದ ಸಮೀಪದಲ್ಲೇ ಮದ್ಯದ ಬಾಟಲಿಗಳು ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನೂ ಸಂಗ್ರಹಿಸಿ, ಪರಿಶೀಲಿಸಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT